ದಾವಣಗೆರೆ: 'ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು' ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಆಗ್ರಹಿಸಿದರು.
'ಯುದ್ಧ ಪ್ರಾರಂಭವಾಗಿ ಹಲವು ತಿಂಗಳು ಕಳೆದಿದ್ದರೂ, ಪಂಚ ರಾಜ್ಯಗಳ ಚುನಾವಣೆ ಮುಗಿದ ತಕ್ಷಣವೇ ಜ್ಞಾನೋದಯ ವಾಗಿ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ ಎಂಬ ಹೇಳಿಕೆಯ ಜೊತೆಗೆ ದರ ಹೆಚ್ಚಳ ಮಾಡಿದ್ದಾರೆ' ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
'ವಿದೇಶಾಂಗ ವ್ಯವಹಾರ, ಹಣಕಾಸು ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿರುವ ಮೋದಿ ಅವರು ಈ ದೇಶದ ಜನರಿಗೆ ಒಳಿತು ಮಾಡುವ ಉದ್ದೇಶವಿದ್ದರೆ ತಕ್ಷಣವೇ ರಾಜೀನಾಮೆ ನೀಡಲಿ. ಅವರು ಮುಂದುವರಿದರೆ ದೇಶಕ್ಕೇ ಬಹು ದೊಡ್ಡ ಅಪಾಯ ಎದುರಾಗಲಿದೆ' ಎಂದರು.
'ದೇಶದ ಜನರಿಗೆ ಮಿತವ್ಯಯದ ಉಪದೇಶ ಮಾಡುವ ಮೋದಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ 5 ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಅವರು ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಅದರಲ್ಲಿ ದೇಶದ ಹಿತಾಸಕ್ತಿ ಅಡಗಿರುವುದಿಲ್ಲ' ಎಂದು ದೂರಿದರು.
'ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ' ಎಂದರು.
ಇಂಟಕ್ ಅಧ್ಯಕ್ಷ ಕೆ.ಎಂ. ಮಂಜುನಾಥ್, ಬಿ.ಎಚ್. ಉದಯ್ಕುಮಾರ್, ಡಿ. ಶಿವಕುಮಾರ್, ಡಿ. ಕೇಶವನಾಯ್ಕ, ಬಿ.ಎಸ್. ಸುರೇಶ್ ಹಾಗೂ ಇತರರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-43-1148137085

