ಬೆಂಗಳೂರು: ಡ್ರಗ್ಸ್ ವಿರುದ್ಧದ ವಿಶೇಷ ಕಾರ್ಯಾಚರಣೆಯಲ್ಲಿ ನಗರದ ಹೆಬ್ಬಾಳ ಠಾಣೆಯ ಪೊಲೀಸರು, ₹35 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಅಲ್ಲದೇ ವಿದೇಶ, ಹೊರ ರಾಜ್ಯಕ್ಕೆ ಸೇರಿದ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ದೆಹಲಿಯ ರೀನಾ ಅಲಿಯಾಸ್ ರೀನಾ ಯಾದವ್(50), ದೇಬಾಸಿಸ್ ಬ್ಯಾನರ್ಜಿ ಅಲಿಯಾಸ್ 'ದೆಬು' (66), ಧೀರಜ್(30) ಹಾಗೂ ಸಾನಿಯಾ (34), ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಪಿ.ಮೊಹಮ್ಮದ್ ಮನ್ಸೂರ್ (30), ಬಂಟ್ವಾಳದ ಅಬ್ದುಲ್ ಸಮದ್ ಹಾಗೂ ಸೆನೆಗಲ್ನ ದನ್ಫಾ ಗೆರಾಲ್ಡ್ ಅಲಿಯಾಸ್ ಡೇವಿಡ್, ತಾಂಜಾನಿಯಾದ ಮಗ್ರೇತ್ ಲಿಗಿನಿಕೊ ಚಾಲೆ ಹಾಗೂ ಒಬಿಯನ್ ರಿಟಾ ಬಂಧಿತರು.
ಬಂಧಿತರಿಂದ ₹35 ಕೋಟಿ ಮೌಲ್ಯದ 17 ಕೆ.ಜಿ 500 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಎರಡು ಕಾರು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.
ಕಳೆದ ವಾರ ಯಶವಂತಪುರ ಠಾಣೆ ಪೊಲೀಸರು ವಿವಿಧೆಡೆ ನಡೆಸಿದ್ದ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯಲ್ಲಿ 9 ಮಂದಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ನೀಡಿದ್ದ ಸುಳಿವು ಆಧರಿಸಿ ದೆಹಲಿ, ನೊಯ್ಡಾ ಹಾಗೂ ಗುರುಗ್ರಾಮದಲ್ಲಿ ಕಾರ್ಯಾಚರಣೆ ನಡೆಸಲಾಯಿತು. 32 ಮಂದಿಯ ವಿಶೇಷ ಪೊಲೀಸ್ ತಂಡವು ದೆಹಲಿಯಲ್ಲೇ 16 ದಿನ ವಾಸ್ತವ್ಯ ಮಾಡಿ ಕಾರ್ಯಾಚರಣೆ ನಡೆಸಿ, 8 ಆರೋಪಿಗಳನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದರು.
ಸೆನೆಗಲ್ ಹಾಗೂ ತಾಂಜಾನಿಯಾದ ಪ್ರಜೆಗಳು ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಹರಿಯಾಣ ಹಾಗೂ ದೆಹಲಿಯಲ್ಲಿ ನೆಲಸಿ ಡ್ರಗ್ಸ್ ದಂಧೆ ನಡೆಸುತ್ತಿದ್ದರು. 2009ರಲ್ಲಿ ದೆಹಲಿಯ ನೆಬಸರಾಯಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರೀನಾ ಯಾದವ್ 13 ವರ್ಷ ಜೈಲು ಶಿಕ್ಷೆ ಅನುಭವಿಸಿ, ಇತ್ತೀಚೆಗೆ ಬಿಡುಗಡೆ ಆಗಿದ್ದರು. ಬಿಡುಗಡೆಯಾದ ಮೇಲೆ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದರು.
ಗಿಫ್ಟ್ ಪ್ಯಾಕ್ನಲ್ಲಿ ಡ್ರಗ್ಸ್ ಸಾಗಣೆ: ನೈಜೀರಿಯಾ ಸೇರಿದಂತೆ ಬೇರೆ ಬೇರೆ ದೇಶಗಳಿಂದ ದನ್ಫಾ ಗೆರಾಲ್ಡ್ ಅಲಿಯಾಸ್ ಡೇವಿಡ್ ಹಾಗೂ ಮಗ್ರೇತ್ ಲಿಗಿನಿಕೊ ಚಾಲೆ ದೆಹಲಿಗೆ ಎಂಡಿಎಂಎ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಅಲ್ಲಿಂದ ಬೆಂಗಳೂರಿಗೆ 'ಗಿಫ್ಟ್ ಪ್ಯಾಕ್' ಹಾಗೂ ಇಸ್ತ್ರಿ ಮಾಡಲು ಬಳಸುವ ಪುಟ್ಟ ಟೇಬಲ್ ಒಳಗೆ ಎಂಡಿಎಂಎ ಕ್ರಿಸ್ಟಲ್ ತುಂಬಿ ರೈಲುಗಳ ಮೂಲಕ ಬೆಂಗಳೂರಿಗೆ ರವಾನೆ ಮಾಡುತ್ತಿದ್ದರು. ಹೆಬ್ಬಾಳದ ಆನಂದನಗರದ ಉನ್ನತಿ ಲೇಔಟ್ ಮುಖ್ಯರಸ್ತೆಯ ಅಪಾರ್ಟ್ಮೆಂಟ್ ಬಳಿ, ಉದ್ಯಾನ, ಪೇಯಿಂಗ್ ಗೆಸ್ಟ್, ಹಾಸ್ಟೆಲ್ಗಳ ಬಳಿ ಮಧ್ಯವರ್ತಿಗಳು ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
'ಈ ಜಾಲದ ಹಿಂದೆ ಇನ್ನೂ ಯಾರೆಲ್ಲ ಇದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು' ಎಂದು ಕಮಿಷನರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ, ಎಸಿಪಿ ಕೆ.ಎಸ್. ತನ್ವೀರ್, ಹೆಬ್ಬಾಳ ಠಾಣೆಯ ಇನ್ಸ್ಪೆಕ್ಟರ್ ಭೈರ ಹಾಜರಿದ್ದರು.
ಡೇವಿಡ್
ಲಿಗಿನಿಕೊ ಚಾಲೆ
ಒಬಿಯನ್ ರಿಟಾ
ಧೀರಜ್
ಮನ್ಸೂರ್
ರೀನಾ ಯಾದವ್
ಸಮದ್
ದೇಬಾಸಿಸ್ ಬ್ಯಾನರ್ಜಿ- ಸೀಮಾಂತ್ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್ಹೊರ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿ ದೊಡ್ಡ ಮೊತ್ತದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡುವಲ್ಲಿ ನಗರ ಪೊಲೀಸರು ಯಶಸ್ವಿ ಆಗಿದ್ದಾರೆ. ಈ ತಂಡಕ್ಕೆ ₹2 ಲಕ್ಷ ಬಹುಮಾನ ನೀಡಲಾಗುವುದು
