ಬೆಂಗಳೂರು: ಸ್ಯಾಂಕಿ ಕೆರೆಯ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಇದರ ವಿಸ್ತೀರ್ಣ ಕುಗ್ಗುತ್ತಿದ್ದು, ಒಳ ಚರಂಡಿ ನೀರು ಕೆರೆಗೆ ಸೇರ್ಪಡೆ ಆಗುತ್ತಿದೆ ಎಂದು ಆರೋಪಿಸಿ ಸದಾಶಿವನಗರದ ನಾಗರಿಕರು, ಪರಿಸರ ಹೋರಾಟಗಾರರು 'ಸೇವ್ ಸ್ಯಾಂಕಿ ಟ್ಯಾಂಕಿ' ಅಭಿಯಾನದಡಿಯಲ್ಲಿ ಕೆರೆಯ ಆವರಣದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
'ಕೆರೆಯ ಸುತ್ತಮುತ್ತಲೂ ಇರುವ ಹಸಿರು ವಲಯದ ನಾಶ, ಕೆರೆಯ ಪರಿಸರ ಸಮತೋಲನ ಹದಗೆಡುತ್ತಿದೆ. ಕೆರೆಯ ಸುತ್ತಮುತ್ತ ದಶಕಗಳಷ್ಟು ಹಳೆಯ ಮರಗಳನ್ನು ಕಡಿಯಲಾಗುತ್ತಿದೆ. ಸಮರ್ಪಕ ಅಧ್ಯಯನವಿಲ್ಲದೇ ನಡೆಯುತ್ತಿರುವ ಕಾಮಗಾರಿಯಿಂದ ಕೆರೆಯ ಮೂಲ ಸ್ವರೂಪವನ್ನು ಹಾಳು ಮಾಡಲಾಗುತ್ತಿದೆ' ಎಂದು ಪ್ರತಿಭಟನಕಾರರು ದೂರಿದರು.
'ವಾಯ್ಸ್ ಆಫ್ ಸದಾಶಿವನಗರ'ದ ಸಂಚಾಲಕಿ ಶಿಲ್ಪಾ ಜತ್ತಿ ಮಾತನಾಡಿ, 'ಸ್ಯಾಂಕಿ ಕೆರೆಯೊಳಗೆ ಹಾಗೂ ಇದರ ಸುತ್ತಮುತ್ತ ನಿರ್ಮಾಣ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಬೆಂಗಳೂರು ನಗರದ ಭೂಗರ್ಭ ಜಲಮಟ್ಟ, ಪರಿಸರ ಸಮತೋಲನ ಹಾಗೂ ಸಾರ್ವಜನಿಕ ಆಸ್ತಿಯ ಭವಿಷ್ಯಕ್ಕೆ ದೊಡ್ಡ ಅಪಾಯವನ್ನು ಉಂಟುಮಾಡುತ್ತಿದೆ. ಕೆರೆಯ ಜಾಗವನ್ನು ಒತ್ತುವರಿ ಮಾಡಲಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು. ಎಲ್ಲಿಂದ ಚರಂಡಿ ನೀರು ಹರಿಯುತ್ತಿದೆ ಎಂಬುದನ್ನು ಪತ್ತೆ ಮಾಡಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿ, 'ಪರಿಸರ ಮತ್ತು ನೀರಿನ ಗುಣಮಟ್ಟ ಪರಿಶೀಲಿಸಬೇಕು. ಕೆರೆಯನ್ನು ಪುನರುಜ್ಜೀವನಗೊಳಿಸಬೇಕು' ಎಂದರು.
ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಮನು ಮತ್ತು ಸದಾಶಿವನಗರದ ಸ್ಥಳೀಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

