Dailyhunt
ಚಳ್ಳಕೆರೆ: ಇಬ್ಬರು ಕೊಲೆ ಆರೋಪಿಗಳ ಬಂಧನ

ಚಳ್ಳಕೆರೆ: ಇಬ್ಬರು ಕೊಲೆ ಆರೋಪಿಗಳ ಬಂಧನ

ಚಳ್ಳಕೆರೆ: ಇಲ್ಲಿನ ಕುರುಬರ ವಿದ್ಯಾರ್ಥಿನಿಲಯದ ಆವರಣದ ಕನಕ ಭವನದ ಬಳಿ ನಡೆದ ಕೂಲಿ ಕಾರ್ಮಿಕರೊಬ್ಬರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಳ್ಳಕೆರೆಯ ಮಂಜುನಾಥ್‌ ಹಾಗೂ ಗಿರೀಶ್‌ ಬಂಧಿತರು. ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ತಾಲ್ಲೂಕಿನ ಪಿ. ಓಬಳಾಪುರದ ಕಾರ್ಮಿಕ ಆಂಜನೇಯ ಎಂಬುವರು ಜುಲೈ 7ರಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹಾಡಹಗಲೇ ನಡೆದ ಕೂಲಿ ಕಾರ್ಮಿಕನ ಈ ಭೀಕರ ಕೊಲೆ ನಗರದಲ್ಲಿ ತಲ್ಲಣ ಮೂಡಿಸಿತ್ತು. ಕೊಲೆಯ ಸ್ಥಳವನ್ನು ಪರಿಶೀಲಿಸಿದ ಪೊಲೀಸರಿಗೆ ಸಮೀಪದಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದು ಗೊತ್ತಾಗಿತ್ತು. ಇದರಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕೊಲೆಯಾದ ಆಂಜನೇಯ (32) ಹಾಗೂ ಆರೋಪಿಗಳು ಪರಿಚಯಸ್ಥರು. ಕೊಲೆಯಾಗುವುದಕ್ಕೂ ಮೊದಲು ಇವರು ಒಟ್ಟಿಗೆ ಇದ್ದರು. ಕ್ಷುಲ್ಲಕ ಕಾರಣಕ್ಕೆ ಇವರ ನಡುವೆ ಗಲಾಟೆ ನಡೆದಿದೆ. ಇದರಿಂದ ಕೆರಳಿದ ಆರೋಪಿ ಮಂಜುನಾಥ್‌ ಅಲಿಯಾಸ್‌ ಕಳ್ಳಮಂಜ ದೊಣ್ಣೆಯಿಂದ ಹೊಡೆದು, ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಗಿರೀಶ್‌ ಅಲಿಯಾಸ್‌ ದಿಲೀಪ್‌ ಕೂಡ ಜೊತೆಗಿದ್ದು ನೆರವಾಗಿದ್ದಾನೆ. ಗಿರೀಶನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನೊಂದೆಡೆ ತಾನೇ ಕೊಲೆ ಮಾಡಿದ್ದಾಗಿ ಕಳ್ಳಮಂಜ ಪರಿಚಯಸ್ಥರೊಂದಿಗೆ ಹೇಳಿಕೊಂಡು ತಿರುಗಾಡುತ್ತಿದ್ದ. ಪೊಲೀಸರು ಹುಡುಕಾಟ ಆರಂಭಿಸಿದ ಮಾಹಿತಿ ತಿಳಿದು ತಲೆಮರೆಸಿಕೊಂಡಿದ್ದ. ಚಿತ್ರದುರ್ಗದಲ್ಲಿ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆ ಮಾಡಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾನೆ. ಈ ಇಬ್ಬರು ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ನಾಲ್ಕೈದು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani