Dailyhunt
ಚಿನ್ನ ಕಳವು ಪ್ರಕರಣ: ಪೊಲೀಸ್ ಅಧಿಕಾರಿಗಳಿಗೆ ನೋಟಿಸ್

ಚಿನ್ನ ಕಳವು ಪ್ರಕರಣ: ಪೊಲೀಸ್ ಅಧಿಕಾರಿಗಳಿಗೆ ನೋಟಿಸ್

ಬೆಳಗಾವಿ: ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ₹ 2.50 ಕೋಟಿ ಮೌಲ್ಯದ 4 ಕೆ.ಜಿ. 900 ಗ್ರಾಂ. ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ.

ಉತ್ತರ ವಲಯದ ಐಜಿಪಿಯಾಗಿದ್ದ ಎಚ್‌.ಜಿ. ರಾಘವೇಂದ್ರ ಸುಹಾಸ್, ಗೋಕಾಕ ಹಿಂದಿನ ಡಿವೈಎಸ್‍ಪಿ ಜಾವೇದ್ ಇನಾಮದಾರ, ಹುಕ್ಕೇರಿಯಲ್ಲಿದ್ದ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಹಾಗೂ ಯಮಕನಮರಡಿ ಠಾಣೆಯ ಹಿಂದಿನ ಪಿಎಸ್‍ಐ ರಮೇಶ ಪಾಟೀಲ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಐಡಿ ಮೂಲಗಳು ಖಚಿತಪಡಿಸಿವೆ.

ಇವರನ್ನು, ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆಯೇ ಇಲ್ಲಿಂದ ವರ್ಗಾವಣೆ ಮಾಡಲಾಗಿದೆ. ಅವರು ಈಗ ತನಿಖೆ ಎದುರಿಸಬೇಕಾಗಿದೆ.

ಪ್ರಕರಣದ ಕಿಂಗ್‍ಪಿನ್ ಎನ್ನಲಾದ ಹುಬ್ಬಳ್ಳಿಯ ಕಿರಣ ವೀರನಗೌಡರ ಸಿಐಡಿ ವಶದಲ್ಲಿದ್ದಾರೆ.

ಜೂನ್ 6ರಂದು ಹುಬ್ಬಳ್ಳಿಯಲ್ಲಿ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೂನ್ 7ರಂದು ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ತೀವ್ರ ವಿಚಾರಣೆಗೆ ಒಳಪಡಿಸಿರುವ ಸಿಐಡಿ ಅಧಿಕಾರಿಗಳು ಆರೋಪಿ ನೀಡಿದ ಹೇಳಿಕೆ ಆಧರಿಸಿ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರಕರಣದಲ್ಲಿ ಈ ಅಧಿಕಾರಿಗಳ ಪಾತ್ರವೇನು ಎನ್ನುವ ಬಗ್ಗೆ ಸಿಐಡಿ ತನಿಖೆ ಮುಂದುವರಿಸಿದೆ.

ಮಂಗಳೂರಿನ ಉದ್ಯಮಿ ತಿಲಕ್ ಮೋನಪ್ಪ ಪೂಜಾರಿ ಎನ್ನುವವರಿಗೆ ಸೇರಿದ ಕಾರಿನಲ್ಲಿದ್ದ ಚಿನ್ನ ಕಳವಾಗಿರುವ ಪ್ರಕರಣ ಇದಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani