ಕುಂದಾಪುರ: ಇಲ್ಲಿನ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿರುವ ನಂದಿಕೇಶ್ವರ ದೇವಸ್ಥಾನದ ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ದೇವಸ್ಥಾನದ ನೂತನ ಮುಖಮಂಟಪ, ದೇವರ ದ್ವಾರ ಬಾಗಿಲಿಗೆ ಹಿತ್ತಾಳೆ ಹೊದಿಕೆಯ ಉದ್ಘಾಟನಾ ಸಮಾರಂಭ ನಡೆಯಿತು.
ಫಲ ಸಮರ್ಪಣೆ, ಗಣಪತಿ ಪೂಜೆ, ಪ್ರಧಾನ ಹೋಮ, ಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಣೇಶ ಪ್ರಸಾದ್ ಶೆಟ್ಟಿ ಮುಖಮಂಟಪ ಉದ್ಘಾಟಿಸಿದರು. ಹಿತ್ತಾಳೆ ಹೊದಿಕೆಯ ದ್ವಾರ ಬಾಗಿಲನ್ನು ಯಡಾಡಿ ಮತ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ ಶೆಟ್ಟಿ ಉದ್ಘಾಟಿಸಿದರು. ನಂದಿಕೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಯು. ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ಮಂಡಳಿ ಗೌರವಾಧ್ಯಕ್ಷ ನಾಗೇಶ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ, ಸ್ತ್ರೀರೋಗ ತಜ್ಞೆ ಡಾ.ಪ್ರಮೀಳಾ ನಾಯಕ್, ಆಡಳಿತ ಮಂಡಳಿ ಉಪಾಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಕೃಷ್ಣ ನಾಯ್ಕ, ಮನೋಹರ್ ಪುತ್ರನ್, ಸುರೇಶ ಎ. ನಾಯ್ಕ, ಜತೆ ಕಾರ್ಯದರ್ಶಿ ದೇವಕಿ ಪಿ. ಸಣ್ಣಯ್ಯ, ಮಂಜುನಾಥ ಪೂಜಾರಿ, ಖಜಾಂಚಿ ಬಿ.ಎಂ. ಚಂದ್ರಶೇಖರ ಭಾಗವಹಿಸಿದ್ದರು. ಯು. ರಾಧಾಕೃಷ್ಣ ಸ್ವಾಗತಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಬಲ್ಲಾಳ್ ಕಿಶೋರ್ ನಿರೂಪಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-28-1820407210

