Dailyhunt
'ಧರ್ಮಸ್ಥಳಕ್ಕೆ ಹೋಗುತ್ತೇನೆಂದು ಬೆದರಿಕೆ: ಪಂಚಮಸಾಲಿಗಳಿಗೆ ತಪ್ಪಿದ ಸಿ.ಎಂ ಸ್ಥಾನ'

'ಧರ್ಮಸ್ಥಳಕ್ಕೆ ಹೋಗುತ್ತೇನೆಂದು ಬೆದರಿಕೆ: ಪಂಚಮಸಾಲಿಗಳಿಗೆ ತಪ್ಪಿದ ಸಿ.ಎಂ ಸ್ಥಾನ'

ಬೆಳಗಾವಿ: 'ಲಿಂಗಾಯತ ಪಂಚಮಸಾಲಿ ಸಮಾಜದವರನ್ನು ಮುಖ್ಯಮಂತ್ರಿ ಮಾಡಿದರೆ ಧರ್ಮಸ್ಥಳಕ್ಕೆ ಹೋಗುವುದಾಗಿ ಒತ್ತಡ ಹಾಕಿದ್ದರು. ಅದಕ್ಕೆ ಬಿಜೆಪಿ ಹೈಕಮಾಂಡ್ ಮಣಿದಿದ್ದರಿಂದಾಗಿ ಪಂಚಮಸಾಲಿಗಳಿಗೆ ಸ್ಥಾನ ತಪ್ಪಿರಬಹುದು' ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಯಾರ ಹೆಸರನ್ನೂ ಪ್ರಸ್ತಾಪಿಸದೇ ಟೀಕಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, 'ಮುಖ್ಯಮಂತ್ರಿ ಬದಲಾವಣೆ ವೇಳೆ ನಮ್ಮ ಸಮಾಜದ ಬಸನಗೌಡ ಪಾಟೀಲ ಯತ್ನಾಳ ಅಥವಾ ಅರವಿಂದ ಬೆಲ್ಲದ ಅವರನ್ನು ಪರಿಗಣಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಬದಲಾಯಿತು. ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿಗೆ ಬಂದಿದ್ದ ವೇಳೆಯವರೆಗೂ, ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು' ಎಂದರು.

'ಒತ್ತಡ ಹಾಕಿದವರು ಯಾರು' ಎಂಬ ಪ್ರಶ್ನೆಗೆ, 'ಗೊತ್ತಿಲ್ಲ. ಆ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೆ. ಹಾಗೆಯೇ ಆಗಿರಬಹುದೆಂದು ನನಗೂ ಅನಿಸಿದೆ' ಎಂದಷ್ಟೇ ಪ್ರತಿಕ್ರಿಯಿಸಿದರು.

ವಾಲ್ಮೀಕಿ ಸಮುದಾಯದ ಮೀಸಲಾತಿ ವಿಚಾರ: ಸರ್ಕಾರದ ವಿರುದ್ಧವೇ ರಾಜು ಗೌಡ ಆಕ್ರೋಶ

'ನಾನು ಮೀಸಲಾತಿಗಾಗಿ ಒತ್ತಾಯಿಸಿ ಪ್ರಾಮಾಣಿಕವಾಗಿ ಪಾದಯಾತ್ರೆ ಮಾಡಿದ್ದೆ. ಹೋರಾಟದ ವೇಳೆ 10 ಲಕ್ಷ ಜನ ಸೇರಿದ್ದರು. ಲಿಂಗಾಯತರಲ್ಲಿ ಬಹುಸಂಖ್ಯಾತರೆಂದರೆ ಪಂಚಮಸಾಲಿಗಳು ಎನ್ನುವ ಸತ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಹೋರಾಟದಿಂದ ಗೊತ್ತಾಗಿದೆ' ಎಂದು ಹೇಳಿದರು.

'ಸರ್ಕಾರ ನೀಡಿದ್ದ ಭರವಸೆ ಈಡೇರಿಲ್ಲ. ಗಡುವು (ಸೆ.15) ಮೀರಿದ್ದರಿಂದಾಗಿ ರಾಜ್ಯದಾದ್ಯಂತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ನಡೆಸುತ್ತಿದ್ದೇವೆ. ಅದು ಅ.1ರಂದು ಬೆಂಗಳೂರು ತಲುಪಲಿದೆ. ಅಷ್ಟರೊಳಗೆ ಬೇಡಿಕೆ ಈಡೇರಿಸಿದರೆ ಮುಖ್ಯಮಂತ್ರಿಗೆ ಕಲ್ಲುಸಕ್ಕರೆಯಿಂದ ತುಲಾಭಾರ ಮಾಡುತ್ತೇವೆ. ಈಗ ನಡೆದಿರುವ ವಿಧಾನಮಂಡಲ ಅಧಿವೇಶನದಲ್ಲೇ ಮುಖ್ಯಮಂತ್ರಿ ಘೋಷಿಸಬೇಕು. ಇಲ್ಲದಿದ್ದರೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ 5ನೇ (ಪಂಚಮ) ಹಂತದ ಚಳವಳಿ ಆರಂಭಿಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani