ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ದೀರ್ಘಾವಧಿವರೆಗೆ ಅಧಿಕಾರದಲ್ಲಿ ಇರಲಿದ್ದಾರೆ ಎಂದು ಅವರು ಬಹುವಾಗಿ ನಂಬಿರುವ ಜ್ಯೋತಿಷಿ ದ್ವಾರಕಾನಾಥ್ ಹೇಳಿದ್ದಾರೆ.
ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಡಿ.ಕೆ.
ಶಿವಕುಮಾರ್ ಅವರು ಸಿಎಲ್ಪಿ ನಾಯಕರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅದರ ನಡುವೆ ಜೋತಿಷಿ ಹೇಳಿಕೆ ಮಹತ್ವ ಪಡೆದುಕೊಂಡುದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಕನಕಪುರ ಶಾಸಕ ಡಿಕೆಶಿಗೆ ಮೂರು ದಿನಾಂಕ ನೀಡಿರುವುದಾಗಿಯೂ ದ್ವಾರಕಾನಾಥ್ ಹೇಳಿದ್ದಾರೆ.
'ಮೇ 31, ಜೂನ್ 3 ಮತ್ತು ಜೂನ್ 6 ಸೇರಿ ಮೂರು ದಿನಾಂಕಗಳನ್ನು ನೀಡಿದ್ದೇನೆ' ಎಂದು ಗುರೂಜಿ ಪಿಟಿಐ ವಿಡಿಯೊದಲ್ಲಿ ತಿಳಿಸಿದ್ದಾರೆ. ಅಲ್ಲದೇ, 2028ರ ವಿಧಾನಸಭೆ ಚುನಾವಣೆ ಬಳಿಕವೂ ಡಿ.ಕೆ. ಶಿವಕುಮಾರ್ ಮತ್ತೆ ಅಧಿಕಾರಕ್ಕೆ ಏರಲಿದ್ದಾರೆ ಎಂದೂ ತಿಳಿಸಿದ್ದಾರೆ.
ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ಸಿದ್ದರಾಮಯ್ಯನವರ ರಾಜೀನಾಮೆ ಅಂಗೀಕರಿಸಿ ಸಂಪುಟ ವಿಸರ್ಜಿಸಿದ ಬಳಿಕ ಕಾಂಗ್ರೆಸ್ ವಲಯದಲ್ಲಿ ಹೊಸ ಸರ್ಕಾರ ರಚನೆ ಕುರಿತಾದ ಚಟುವಟಿಕೆ ಬಿರುಸುಗೊಡಿದೆ.
'ಡಿಕೆಶಿ ಒಂದು ದಿನದ ಅಥವಾ ಒಂದು ಅವಧಿಯ ಮುಖ್ಯಮಂತ್ರಿ ಅಲ್ಲ. ಅವರು ದೀರ್ಘ ಇನಿಂಗ್ಸ್ ಆಡಲಿದ್ದಾರೆ. ಅವರ ಭವಿಷ್ಯ ಉತ್ತಮವಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ದೀರ್ಘಾವಧಿಯವರೆಗೆ ಉಳಿಯಲಿದ್ದಾರೆ' ಎಂದು ಜ್ಯೋತಿಷಿ ಹೇಳಿದ್ದಾರೆ. ಈಗ ಕೇವಲ ಅವರು ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 2028ರಲ್ಲೂ ಗೆದ್ದು ನಿಜವಾದ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಲಿದ್ದಾರೆ ಎಂದೂ ಗುರೂಜಿ ಹೇಳಿದ್ದಾರೆ.
ರಾಜ್ಯದ ಬಗ್ಗೆ ಉತ್ತಮ ದೃಷ್ಟಿಕೋನ ಹೊಂದಿರುವ ಡಿ.ಕೆ. ಶಿವಕುಮಾರ್ ಸಾರಥ್ಯದಲ್ಲಿ ರಾಜ್ಯವು ಸಮೃದ್ಧಿ ಕಾಣಲಿದೆ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

