Dailyhunt
ಎನ್‌ಡಿವಿ ಹಾಸ್ಟೆಲ್‌ ಕಟ್ಟಡಕ್ಕೆ ₹ 5 ಕೋಟಿ ಅನುದಾನ: ಬಿ.ಎಸ್.ಯಡಿಯೂರಪ್ಪ ಘೋಷಣೆ

ಎನ್‌ಡಿವಿ ಹಾಸ್ಟೆಲ್‌ ಕಟ್ಟಡಕ್ಕೆ ₹ 5 ಕೋಟಿ ಅನುದಾನ: ಬಿ.ಎಸ್.ಯಡಿಯೂರಪ್ಪ ಘೋಷಣೆ

ಶಿವಮೊಗ್ಗ: ಶತಮಾನ ಪೂರೈಸಿರುವ ನಗರ ಡಿವಿಜನ್ ವೀರಶೈವ (ಎನ್‌ಡಿವಿ) ಹಾಸ್ಟೆಲ್ ನೂತನ ಕಟ್ಟಡ ನಿರ್ಮಾಣಕ್ಕೆ ₹ 5 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.

ನಗರ ಡಿವಿಜನ್ ವೀರಶೈವ ಹಾಸ್ಟೆಲ್‌ ನೂತನ ಕಟ್ಟಡಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವೀರಶೈವ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ಪ್ರಮುಖ ಸಂಸ್ಥೆ. ಅನ್ನದಾನ, ವಿದ್ಯಾದಾನಕ್ಕೆ ಸಮಾನ ಆದ್ಯತೆ ನೀಡಿದೆ. ವಿದ್ಯಾದಾನದ ಮೂಲಕ ಸಮಾಜದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ತಳಪಾಯ ಹಾಕಬಹುದು ಎಂಬ ದೂರದೃಷ್ಟಿಯ ಫಲವಾಗಿ ಶತಮಾನದ ಹಿಂದೆ ಎನ್‌ಡಿವಿ ಸಂಸ್ಥೆ ಹುಟ್ಟುಕೊಂಡಿತ್ತು. ಹಾಸ್ಟೆಲ್‌ ಆರಂಭದ ಕಾರಣ ಗ್ರಾಮೀಣ ವಿದ್ಯಾರ್ಥಿಗಳೂ ನಗರಕ್ಕೆ ಬಂದು ಓದಲು ದಾರಿಮಾಡಿಕೊಟ್ಟರು.

ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.‌

ಸಮಾನ ಮನಸ್ಕರ ಉತ್ತಮ ಆಲೋಚನೆಗಳ ಫಲವಾಗಿ ಹಾಸ್ಟೆಲ್‌ ಸ್ಥಾಪನೆಗೊಂಡು ಆಲದಮರದ ರೀತಿ ಬೆಳೆದಿದೆ. ತನ್ನ ನೆರಳಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಪೋಷಿಸಿ, ಬೆಳೆಸಿರುವುದು ಶ್ಲಾಘನೀಯ. ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿಯಯಬೇಕು ಎನ್ನುವುದು ಜಿಲ್ಲೆಯ ಪ್ರಮುಖರ ಆಶಯವೂ ಆಗಿತ್ತು. ಅಂದಿನಿಂದ ಇಂದಿನವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ. ಅವರು ಶೈಕ್ಷಣಿಕವಾಗಿ ಮುಂದುವರಿಯಲು ಸಂಸ್ಥೆ ಅನುವು ಮಾಡಿಕೊಟ್ಟಿರುವುದು ಅನುಕರಣೀಯ. ನೂತನ ಕಟ್ಟಡದ ನಿರ್ಮಾಣ ಶೀಘ್ರ ಪೂರ್ಣಗೊಂಡು ಇನ್ನಷ್ಟು ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲಿ ಎಂದರು.

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಮೇಯರ್ ಸುವರ್ಣಾ ಶಂಕರ್, ಸದಸ್ಯ ವಿಶ್ವಾಸ್, 'ಸೂಡಾ' ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಸಮಾಜದ ಮುಖಂಡರಾದ ಎನ್.ಜೆ.ರಾಜಶೇಖರ್, ಪಿ.ರುದ್ರೇಶ್‌, ವೈ.ಎಚ್.ನಾಗರಾಜ್ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani