ಬೆಂಗಳೂರು: ವಿಧಾನಸಭೆಗಳಲ್ಲಿ ಲೋಕಸಭಾಧ್ಯಕ್ಷರು ಮಾತನಾಡಿರುವುದು ಇದು ಮೊದಲೇನಲ್ಲ. ಎಸ್.ಎಂ. ಕೃಷ್ಣ ಅವರ ಅವಧಿಯಲ್ಲೂ ಈ ರೀತಿ ನಡೆದಿತ್ತು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಧಾನ ಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ಲೋಕಸಭಾಧ್ಯಕ್ಷರು ಮಾಡಿದ ಭಾಷಣವನ್ನು ಕಾಂಗ್ರೆಸ್ ಬಹಿಷ್ಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, 'ವಿರೋಧ ಪಕ್ಷದ ನಾಯಕರ ಜೊತೆ ಸದನದಲ್ಲಿ ಮಾತನಾಡಿಯೇ ಜಂಟಿ ಸದನಗಳ ಭಾಷಣಕ್ಕೆ ತೀರ್ಮಾನ ಮಾಡಿದ್ದೆವು.
'ಇದೇ ವಿಧಾನಸಭೆಯಲ್ಲಿ 2002 ಜೂನ್ 24ರಂದು, ಅಂದಿನ ಲೋಕಸಭಾಧ್ಯಕ್ಷರಾಗಿದ್ದ ಮನೋಹರ್ ಜೋಶಿ ಭಾಷಣ ಮಾಡಿದ್ದರು. ಆಗ ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ವಿಧಾನಸಭೆಗಳಲ್ಲಿ ಲೋಕಸಭಾಧ್ಯಕ್ಷರು ಮಾತನಾಡಿರುವುದು ಇದು ಮೊದಲೇನಲ್ಲ. ಬೇರೆ ರಾಜ್ಯಗಳ ವಿಧಾನಸಭೆಗಳಲ್ಲೂ ಲೋಕಸಭಾಧ್ಯಕ್ಷರು ಭಾಷಣ ಮಾಡಿದ್ದಾರೆ. ಭಾಗವಹಿಸಿದ್ದು ತಪ್ಪು ಎನ್ನುವವರಿಗೆ ಇದು ಅರ್ಥವಾಗಿಲ್ಲ. ನಾವು ತೆಗೆದುಕೊಳ್ಳುವ ನಿರ್ಣಯವೇ ಅಂತಿಮ. ತೆಗೆದುಕೊಂಡ ನಿರ್ಣಯ ಬೇರೆಯವರು ಆಕ್ಷೇಪಿಸುವಂತಿಲ್ಲ. ಸಂವಿಧಾನ ಉಲ್ಲಂಘನೆ ಆಗಿಲ್ಲ' ಎಂದರು.

