Dailyhunt Logo
  • Light mode
    Follow system
    Dark mode
    • Play Story
    • App Story
ಎ.ಸಿ ಕೊಠಡಿಯಲ್ಲಿ ರೈತರ ಭೂಮಿ ಬಗ್ಗೆ ತೀರ್ಮಾನ ಬೇಡ: ನಿಖಿಲ್ ಕುಮಾರಸ್ವಾಮಿ

ಎ.ಸಿ ಕೊಠಡಿಯಲ್ಲಿ ರೈತರ ಭೂಮಿ ಬಗ್ಗೆ ತೀರ್ಮಾನ ಬೇಡ: ನಿಖಿಲ್ ಕುಮಾರಸ್ವಾಮಿ

ಹಾರೋಹಳ್ಳಿ (ರಾಮನಗರ): ಬಿಡದಿ ಟೌನ್‌ಶಿಪ್ ಯೋಜನೆ ವಿಧಾನಸೌಧದ ನಾಲ್ಕು ಗೋಡೆಗಳ ಮಧ್ಯೆ ಕೂತು ಚರ್ಚಿಸುವ ವಿಷಯವಲ್ಲ. ಇದು ರೈತರ ಬದುಕಿನ ಪ್ರಶ್ನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹಾರೋಹಳ್ಳಿ ಹೋಬಳಿಯ ದೊಡ್ಡಬಿದರಕಲ್ ಗ್ರಾಮದ ಊರ ಹಬ್ಬಕ್ಕೆ ಭೇಟಿ ನೀಡಿದ್ದ ವೇಳೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸನ್ಮಾನ್ಯ ಕುಮಾರಣ್ಣ ಅವರು ಸ್ಪಷ್ಟವಾಗಿ ಹೇಳಿದ್ದಾರೆ - ಚರ್ಚೆ ಬೇಕಾದರೆ ಬೈರಮಂಗಲ ಸರ್ಕಲ್‌ಗೆ ಬನ್ನಿ. ಬಾಧಿತ ರೈತರ ಸಮ್ಮುಖದಲ್ಲೇ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ" ಎಂದು ನಿಖಿಲ್ ತಿಳಿಸಿದರು.

ರೈತರೇ ಅಂತಿಮ ತೀರ್ಪುಗಾರರು:

ಈ ವಿವಾದಕ್ಕೆ ಇತ್ಯಾರ್ಥವಾಗಬೇಕಾದರೆ ಒಂದೇ ಮಾರ್ಗ. ಮುಖ್ಯಮಂತ್ರಿಗಳೇ ಸ್ಥಳಕ್ಕೆ ಬಂದು ರೈತರೊಂದಿಗೆ ನೇರವಾಗಿ ಚರ್ಚೆ ಮಾಡಬೇಕು. ಈ ಟೌನ್‌ಶಿಪ್ ಯೋಜನೆಗೆ ಸ್ಥಳೀಯ ರೈತರು ಸಹಮತ ವ್ಯಕ್ತಪಡಿಸಿದರೆ ಸರ್ಕಾರ ಮುಂದುವರಿಯಲಿ. ವಿರೋಧ ವ್ಯಕ್ತಪಡಿಸಿದರೆ, ಮಾನ್ಯ ಮುಖ್ಯಮಂತ್ರಿಗಳೇ ಜನರಿಗೆ ಉತ್ತರ ನೀಡಬೇಕು" ಎಂದು ನಿಖಿಲ್ ಆಗ್ರಹಿಸಿದರು.

ಇಲ್ಲಿಯವರೆಗೆ ಯಾವೊಬ್ಬ ಜನಪ್ರತಿನಿಧಿಯೂ, ಜಿಲ್ಲಾಧಿಕಾರಿಯೂ ಸ್ಥಳಕ್ಕೆ ಬಂದು ಸರ್ವೇ ಮಾಡಿಲ್ಲ. ಸ್ಥಳೀಯ ರೈತರ ಜೊತೆ ಒಂದೇ ಒಂದು ಬಾರಿಯೂ ಚರ್ಚೆ ಮಾಡಿಲ್ಲ. ರೈತರನ್ನು ಸಂಪೂರ್ಣ ಕತ್ತಲಲ್ಲಿಟ್ಟು ಯೋಜನೆ ರೂಪಿಸಲಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಒಗ್ಗಟ್ಟಯ ಒಡೆಯಲು ಸಂಚು:

ರಾಜ್ಯ ಸರ್ಕಾರ ರೈತರ ಒಗ್ಗಟ್ಟನ್ನು ಒಡೆಯಲು ವ್ಯವಸ್ಥಿತವಾಗಿ ಸಂಚು ರೂಪಿಸಿದೆ. 25 ಕೋಟಿ ರೂ. ಇಟ್ಟುಕೊಂಡು, ಒಟ್ಟು 755 ಬಾಧಿತ ರೈತರ ಪೈಕಿ ಕೇವಲ 7 ಜನ ರೈತರ ಬೆಂಬಲ ಪಡೆದುಕೊಂಡು ಇಡೀ ಟೌನ್‌ಶಿಪ್ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ದೇಶದ ಇತಿಹಾಸದಲ್ಲೇ ಇಂತಹ ಘಟನೆ ಇದೇ ಮೊದಲು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಜೆಡಿಎಸ್ ಮುಖಂಡರು ಇದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani