
ಗೋಕಾಕ: ಯುವ ಕಾಂಗ್ರೆಸ್ ಗೋಕಾಕ ವಿಧಾನಸಭಾ ಮತ ಕ್ಷೇತ್ರ ಘಟಕದಿಂದ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನಾಗಿ ಆಚರಿಸಿ ಶುಕ್ರವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ರಸ್ತೆ ಮಧ್ಯದಲ್ಲೇ ಮಿರ್ಚಿ ಭಜಿ ತಯಾರಿಸಿ, ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
'ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ, ಯುವಕರಿಗೆ ಮೋಸ ಮಾಡಿದ್ದಾರೆ. ಉದ್ಯೋಗ ನೀಡುವುದು ಒಂದು ಕಡೆ ಇರಲಿ, ಅವರ ಆಡಳಿತಾವಧಿಯಲ್ಲಿ ದೇಶದಾದ್ಯಂತ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಬಿಜೆಪಿ ಸರ್ಕಾರದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ದೇಶಕ್ಕೆ ಉಪಯೋಗವಾಗುವ ಯಾವ ಯೋಜನೆಯೂ ಜಾರಿಗೊಂಡಿಲ್ಲ. ಯುವಕರಿಗೆ ನೆರವಾಗುವ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಖಾಲಿ ಇರುವ ಉದ್ಯೋಗ ಭರ್ತಿಗೂ ಪ್ರಧಾನಿ ಕ್ರಮ ಜರುಗಿಸಿಲ್ಲ' ಎಂದು ಆರೋಪಿಸಿದರು.
'ಕೇಂದ್ರ ಸರ್ಕಾರ ಕೂಡಲೇ ಯುವಕರಿಗೆ ಉದ್ಯೋಗ ಕಲ್ಪಿಸಬೇಕು. ಇಲ್ಲದಿದ್ದರೆ ಅಧಿಕಾರದಿಂದ ನಿರ್ಗಮಿಸಬೇಕು' ಎಂದು ಆಗ್ರಹಿಸಿದರು.
ಮುಖಂಡರಾದ ವಿವೇಕ ಜತ್ತಿ, ಬಸವರಾಜ ಸಾಯನ್ನವರ, ಭಗವಂತ ಹುಳ್ಳಿ, ರೆಹಮಾನ ಮೋಕಾಶಿ, ಪ್ರವೀಣ ಗುಡ್ಡಾಕಾಯು, ರಾಹುಲ ಬಡೇಸಗೋಳ, ಸನೀಲ ಗುಡ್ಡಾಕಾಯು, ಮುಸ್ತಫಾ ಫುಲ್ತಾಂಬೆ, ವಕೀಲರಾದ ಗುರುರಾಜ ಪೂಜೇರ ಮತ್ತು ಬಿ.ಕೆ. ಕಂಟೀಕಾರ, ಪುಟ್ಟು ಖಾನಾಪೂರೆ, ಮುನ್ನಾ ಖತೀಬ್, ಪರಶುರಾಮ ರಾಮಗಾನಟ್ಟಿ, ರಾಮ ಗುಡ್ಡಾಕಾಯು, ಇಮಾಮ ಅಂಡಗಿ, ಶಬ್ಬೀರ ಮುಜಾವರ, ರಫೀಕ ಖಾಜಿ, ಪ್ರವೀಣ ತುಕ್ಕಾನಟ್ಟಿ, ಮಾರುತಿ ಹತ್ತರವಾಟ, ಶಿವಾನಂದ ಹತ್ತರವಾಟ, ಶ್ರೀಶೈಲ ಮೆಳವಂಕಿ, ಇಮ್ರಾನ್ ತಪಕೀರ, ಮುನ್ನಾ ಕತ್ತಿ, ಜಾಕೀರ ನದಾಫ್ ಪಾಲ್ಗೊಂಡಿದ್ದರು.