Dailyhunt Logo
  • Light mode
    Follow system
    Dark mode
    • Play Story
    • App Story
ಹಣಕಾಸು ವಿಚಾರಕ್ಕೆ ತ್ರಿವಳಿ ಕೊಲೆ?: ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು

ಹಣಕಾಸು ವಿಚಾರಕ್ಕೆ ತ್ರಿವಳಿ ಕೊಲೆ?: ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು

ಬೆಂಗಳೂರು: ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯ ಡಾಮಿನಿಕ್‌ ಲೇಔಟ್‌ನ ಸಾಯಿ ಗ್ರೀನ್‌ ಹೋಮ್ಸ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳಾದ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್‌ನನ್ನು 15 ದಿನ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

'ಇದುವರೆಗೂ ನಡೆದ ತನಿಖೆಯಿಂದ ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವು ದಾಗಿ ಆರೋಪಿಗಳು ತಿಳಿಸಿದ್ದಾರೆ. ಬೇರೆ ಏನಾದರೂ ಕಾರಣವಿತ್ತೇ ಎಂಬುದರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ' ಎಂದು ಪೊಲೀಸರು ಹೇಳಿದರು.

ತಮಿಳುನಾಡಿನ ಸೋಮ ಸುಂದರ್‌ (52), ಅವರ ಪತ್ನಿ ಮುತ್ತುಲಕ್ಷ್ಮಿ(48) ಹಾಗೂ ಕಿರಿಯ ಮಗಳು ಸುಪ್ರಿಯಾ(19) ಅವರ ಕೊಲೆ ನಡೆದಿತ್ತು. ಸೋಮಸುಂದರ್‌- ಮುತ್ತುಲಕ್ಷ್ಮಿ ಅವರ ಹಿರಿಯ ಪುತ್ರಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್ ಸೇರಿಕೊಂಡು ಮೂವರನ್ನು ಕೊಲೆ ಮಾಡಿ, ಪುದುಚೆರಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

'ಶ್ವೇತಾ ಹಾಗೂ ಕೆನೆತ್‌ ಅವರು ಸಹಜೀವನ ನಡೆಸುತ್ತಿದ್ದರು. ಅಲ್ಲದೇ ಸ್ವಂತ ಉದ್ಯಮ ಸ್ಥಾಪಿಸಲು ಶ್ವೇತಾ ಬ್ಯಾಂಕ್‌ನಿಂದ ₹30 ಲಕ್ಷ ಸಾಲ ಪಡೆದಿದ್ದರು. ಸಾಲದ ಕಂತು ಪಾವತಿಸಲು ಶ್ವೇತಾಗೆ ಸಾಧ್ಯ ಆಗುತ್ತಿರಲಿಲ್ಲ. ನೆರವಿಗಾಗಿ ತಂದೆ ಸೋಮಸುಂದರ್‌ ಬಳಿ ಶ್ವೇತಾ ಕೇಳಿದ್ದರು. ಸೋಮಸುಂದರ್ ಹಣ ಕೊಡಲು ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಗಲಾಟೆ ಆಗಿತ್ತು. ಅಲ್ಲದೇ, ಶ್ವೇತಾ ಹಾಗೂ ಕೆನೆತ್‌ ಒಟ್ಟಿಗೇ ಫ್ಲ್ಯಾಟ್‌ನಲ್ಲಿ ಇರುವುದು ಮುತ್ತುಲಕ್ಷ್ಮಿಗೆ ಇಷ್ಟ ಇರಲಿಲ್ಲ. ಜೂನ್‌ 22ರಂದು ರಾತ್ರಿ ಸೋಮಸುಂದರ್, ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾ ಫ್ಲ್ಯಾಟ್‌ಗೆ ಬಂದಿದ್ದರು. ಆಗಲೂ ಗಲಾಟೆ ನಡೆದು ಮೂವರ ಕೊಲೆ ನಡೆದಿತ್ತು' ಎಂದು ಪೊಲೀಸರು ಹೇಳಿದರು.

 ಶ್ವೇತಾ
Dailyhunt
Disclaimer: This content has not been generated, created or edited by Dailyhunt. Publisher: Prajavani