ಮಲೇಬೆನ್ನೂರು: 'ಸತ್ಯಾಗ್ರಹ ಮಾಡಿಯಾದರೂ ಭೈರನಪಾದ ಏತ ನೀರಾವರಿ ಅನುಷ್ಠಾನ ಹಾಗೂ ಹೆಳವನಕಟ್ಟೆ ಕೆರೆಗೆ ನೀರು ತುಂಬಿಸುತ್ತೇನೆ' ಎಂದು ಶಾಸಕ ಎಸ್. ರಾಮಪ್ಪ ಮಂಗಳವಾರ ಘೋಷಿಸಿದರು.
ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ದೇವಾಲಯದ ಕೆರೆಗೆ ಬಾಗಿನ ಸಮರ್ಪಣೆ ಮಾಡಿ ಮಾತನಾಡಿದರು.
ತೈಲ, ಅಡುಗೆ ಅನಿಲ, ರಸಗೊಬ್ಬರ, ದೈನಂದಿನ ಸಾಮಾನುಗಳ ಬೆಲೆ ಹೆಚ್ಚಿವೆ. ನಾಗರಿಕರು ಸಂಕಷ್ಟದಲ್ಲಿದ್ದಾರೆ. ರೈತರ ಉತ್ಪನ್ನಗಳಿಗೆ ಬೆಲೆಯಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆದು ರೈತರ ಸಹಾಯಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು.
'ಭೈರನಪಾದ ಏತ ನೀರಾವರಿ, ಹೆಳವನಕಟ್ಟೆ ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಯಾವುದೇ ಕೆಲಸ ಮಾಡಿಲ್ಲ. ನನ್ನ ಅವಧಿಯ ಅಭಿವೃದ್ಧಿ ಕಾಮಗಾರಿ ಅನುದಾನದ ಲೆಕ್ಕಪತ್ರ ನೀಡುತ್ತೇನೆ. ಅವರೂ ತಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಲೆಕ್ಕಪತ್ರ ನೀಡಲಿ' ಎಂದು ಆಗ್ರಹಿಸಿದರು.
ಎಪಿಎಂಸಿ ಅಧ್ಯಕ್ಷ ಪಟೇಲ್ ಮಂಜುನಾಥ್, ಮುಖಂಡರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಡಾ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಬಿದ್ ಅಲಿ, ನಂದಿಗಾವಿ ಶ್ರೀನಿವಾಸ್, ವಿರೂಪಾಕ್ಷಪ್ಪ ಮಾತನಾಡಿದರು.
ಶಾಸಕರಿಗೆ ಪೂರ್ಣಕುಂಭ, ಮಂಗಳವಾದ್ಯ ಸಹಿತ ಅರ್ಚಕರಾದ ಮಂಜುನಾಥ ಆಚಾರ್, ಗುರುರಾಜಾಚಾರ್, ಉಪಾಧಿವಂತ ಅಮರನಾಥ್ ಜೋಯ್ಸ್, ಮುಜರಾಯಿ ಶಾನುಭೋಗ ಧರ್ಮರಾವ್ ಸ್ವಾಗತಿಸಿದರು.
ತಹಶೀಲ್ಸಾರ್ ಕೆ.ಬಿ. ರಾಮಚಂದ್ರಪ್ಪ, ಆರ್. ರವಿ, ಎಸ್.ಜಿ. ಪರಮೇಶ್ವರಪ್ಪ, ಪಿ.ಎಸ್. ಹನುಮಂತಪ್ಪ, ಮಂಜುನಾಥ್, ಪೂಜಾರ್ ಗಂಗಾಧರ್, ಸೈಯದ್ ರೋಷನ್, ಗೊಂದಿ ರೇವಣಸಿದ್ದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗನಾಥ್ ಮತ್ತು ಗ್ರಾಮಸ್ಥರು ಇದ್ದರು.

