ಜೈಪುರ: ಇಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಕೆಲ ದುಷ್ಕರ್ಮಿಗಳು ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ.
ಬೆಂಬಲಿಗರು ದೀಪ್ಕೆ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡಿದ್ದರು. ಈ ವೇಳೆ ದೀಪ್ಕೆ ಸ್ಕಾರ್ಪ್ ಅನ್ನು ಎಳೆದು ಹಲವು ಬಾರಿ ಕಪಾಳಮೋಕ್ಷ ಮಾಡಲಾಗಿದೆ.
ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಈ ಸಂಬಂಧ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀಟ್ ಪೇಪರ್ ಲೀಕ್ ಮತ್ತು ನಿರುದ್ಯೋಗ ಸಂಬಂಧ ಪ್ರತಿಭಟನೆ ನಡೆಸಲು ಶಾಹೀದ್ ಸ್ಮಾರಕದ ಬಳಿ ಭಾರಿ ಪ್ರಮಾಣದಲ್ಲಿ ಯುವಕರು ಸೇರಿದ್ದರು. ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಲು ಮುಂದಾದ ದೀಪ್ಕೆ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದವರನ್ನು ಹಿಡಿದು ಥಳಿಸಿದ ದೀಪ್ಕೆ ಬೆಂಬಲಿಗರು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ನನ್ನ ಮೇಲಿನ ಹಲ್ಲೆಯು ನಮ್ಮ ಚಳವಳಿಯನ್ನು ಹತ್ತಿಕ್ಕಲು ನಡೆಸಿದ ಪ್ರಯತ್ಬವಾಗಿದೆ ಎಂದು ದೀಪ್ಕೆ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇಂತಹ ಘಟನೆಗಳಿಂದ ನಾವು ಭಯಪಡುವುದಿಲ್ಲ. ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬುದೇ ನಮ್ಮ ಏಕೈಕ ಒತ್ತಾಯವಾಗಿದೆ ಎಂದಿದ್ದಾರೆ.
ಇದಕ್ಕೂ ಮೊದಲು, ಪಶ್ನೆಪತ್ರಿಕೆ ಸೋರಕೆ, ಭ್ರಷ್ಟಾಚಾರ ಮತ್ತು ಯುವಕರ ಸಮಸ್ಯೆ ಕುರಿತಾದ ಪ್ಲೆಕಾರ್ಡ್ಗಳನ್ನು ಹಿಡಿದು ಘೋಷಣೆ ಕೂಗಿದರು.

