ಜಮಖಂಡಿ: ತಾಲ್ಲೂಕಿನಲ್ಲಿ ಶೇ.77 ರಷ್ಟು ರೈತರು ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದಾರೆ. ಆದರೆ, ಮುಂಗಾರು ಮಳೆ ಸುರಿಯುತ್ತಿಲ್ಲ. ಒಣ ಗಾಳಿ ಹಾಗೂ ಬಿಸಿಲಿಗೆ ಬಿತ್ತಿರುವ ಭೂಮಿ ಬಾಯಿ ತೆರೆಯುತ್ತಿದೆ. ಆದ್ದರಿಂದ ರೈತರು ಮಳೆಗಾಗಿ ಮುಗಿಲು ನೋಡುವಂತಾಗಿದೆ. ಮುಂಗಾರು ವಿಫಲವಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಾರಂಭದಲ್ಲಿ ಒಂದೆರಡು ದಿನ ಮಳೆಯಾಗಿ ಭೂಮಿ ಹಸಿಯಾಗಿತ್ತು. ಮುಂಗಾರು ಮಳೆ ಕೈ ಹಿಡಿಯುತ್ತದೆ ಎಂಬ ನಿರೀಕ್ಷೆಯೊಂದಿಗೆ ರೈತ ಸಾಲ ಮಾಡಿ ತೊಗರಿ, ಉದ್ದು, ಸೂರ್ಯಕಾಂತಿ, ಶೇಂಗಾ, ಮೆಕ್ಕೆಜೋಳ, ಕಬ್ಬು, ಅರಿಶಿನ ಸೇರಿದಂತೆ ಇತರೆ ಬೀಜಗಳನ್ನು ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದು ಇಲ್ಲಿವರೆಗೆ ಹಲವಾರು ಕಡೆಗಳಲ್ಲಿ ಬೆಳೆಗಳು ತೇವಾಂಶ ಇಲ್ಲದ ಕಾರಣ ಮೊಳಕೆ ಒಡೆದಿಲ್ಲ. ಇನ್ನೂ ಕೆಲ ಕಡೆಗಳಲ್ಲಿ ಮೊಳಕೆಯೊಡೆಯದೇ ಬೀಜ ಹಾಳಾಗಿವೆ. ಇನ್ನೂ ಕೆಲ ಕಡೆಗಳಲ್ಲಿ ಸಸಿ ಎದ್ದಿದ್ದು ಮಳೆ ಇಲ್ಲದಕ್ಕೆ ಕಮರುತ್ತಿವೆ.
ವಾಡಿಕೆಗಿಂತಲೂ ಕಡಿಮೆ ಮಳೆ ಬಿದ್ದಿರುವುದು ರೈತರಲ್ಲಿ ಅತಂಕ ಮೂಡಿಸಿದೆ. ಮಳೆಯ ಅಭಾವದಿಂದ 10-15 ದಿನಗಳಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ. ಸಾವಿರಾರು ಖರ್ಚು ಮಾಡಿ ಬಿತ್ತನೆ ಮಾಡಿರುವ ರೈತರು ಆರ್ಥಿಕ ನಷ್ಟದ ಭೀತಿಯಲ್ಲಿದ್ದಾರೆ. ಶೀಘ್ರದಲ್ಲಿ ಉತ್ತಮ ಮಳೆಯಾಗದಿದ್ದರೆ ಮರುಬಿತ್ತನೆ ಮಾಡುವ ಅನಿವಾರ್ಯವಾಗಿದೆ.
ಮುಂಗಾರು ವೈಫಲ್ಯದಿಂದ ಕೃಷಿ ಚಟುವಟಿಕೆ ಮಾತ್ರವಲ್ಲದೇ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಅಭಾವ ಎದುರಾಗಿದೆ. ಮೇವು ಇಲ್ಲದೇ ಜಾನುವಾರುಗಳು ನೀರಿಕ್ಷಿತ ಮಟ್ಟದಲ್ಲಿ ಹಾಲು ಕರೆಯುತ್ತಿಲ್ಲ, ಇದರಿಂದ ಹಲವು ಕಡೆಗಳಲ್ಲಿ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿರುವುದರಿಂದ ನದಿ ತೀರದಲ್ಲಿ 15 ದಿನಗಳಿಂದ ನೀರಿಗಾಗಿ ಪರದಾಡುವಂತಾಗಿದೆ. ಕೊಳವೆ ಬಾವಿ ತೆಗೆದರೆ ಖನೀಜ ನೀರು ಬರುತ್ತದೆ. ಹೀಗಾಗಿ ನದಿ ನೀರನ್ನು ನಂಬಿ ಜೀವನ ಮಾಡುತ್ತೆವೆ. ಆದರೆ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆಯಿಂದ ದೂರದ ಗ್ರಾಮಗಳಿಂದ ಟ್ಯಾಂಕರ್ ಮೂಲಕ ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ' ಎಂದು ಶೂರ್ಪಾಲಿ ಗ್ರಾಮದ ರೈತ ಅಣ್ಣಪ್ಪ ಅಂಬಲಿ ತಿಳಿಸಿದರು.
'ಈ ಸಲ ಬೇಸಿಗೆಯಲ್ಲಿ ವಿಪರೀತ ಬಿಸಿಲಿನ ಅನುಭವ ಆಗಿದ್ದು, ಉತ್ತಮ ಮಳೆ ಬೀಳುವ ನಿರೀಕ್ಷೆ ಹೊಂದಲಾಗಿತ್ತು. ಎರಡು ಸಲ ಮಳೆ ಬಂದಿದ್ದು ಬಿಟ್ಟರೆ ವಿಪರಿತ ಗಾಳಿ, ಬಿಸಿಲು ಮಾತ್ರ ಇದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಮರು ಬಿತ್ತನೆ ಮಾಡುವ ಅನಿವಾರ್ಯತೆ ಆದರೆ ರೈತರ ಸಹಾಯಕ್ಕೆ ಬರಬೇಕು' ಎಂದು ರೈತ ಕಲ್ಲಪ್ಪ ಬಿರಾದಾರ ಹೇಳಿದರು.
'ಜೂನ್ ತಿಂಗಳಲ್ಲಿ ಶೇ 91 ರಷ್ಟು ಮಳೆ ಕೊರತೆ ಇದೆ. 15 ಎಂಎಂ ಮಳೆ ಆಗಬೇಕಿತ್ತು, ಆದರೆ, ಬರೀ 1 ಎಂಎಂ ರಷ್ಟು ಮಾತ್ರ ಮಳೆಯಾಗಿದೆ' ಎಂದು ಕೃಷಿ ಇಲಾಖೆಯ ರಮೇಶ ಪಡಸಲಗಿ ತಿಳಿಸಿದರು.
ಜಮಖಂಡಿ:ತೇವಾಂಶ ಕೊರತೆಯಿಂದ ಬಿತ್ತನೆ ಮಾಡಿರುವ ಬೆಳೆ ಸರಿಯಾಗಿ ನಾಟದಿರುವದು ಸಿದ್ದಪ್ಪ ಪಟ್ಟಿಹಳ್ಳ ಜಮಖಂಡಿ ಸಹಾಯಕ ಕೃಷಿ ನಿರ್ದೇಶಕಶಶೇ 77 ರಷ್ಟು ಬಿತ್ತನೆ ಕಾರ್ಯ ಮುಗಿದಿದ್ದು ಮಳೆಯ ಅವಶ್ಯಕತೆ ಇದೆ. ಇನ್ನೂ ಬಿತ್ತನೆ ಮಾಡದ ರೈತರು ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು
