ಗುರಗಾಂವ್: ಡ್ರೋನ್ ದಾಳಿ ಮತ್ತು ಗಸ್ತು ವಿರುದ್ಧ ಅಗತ್ಯ ಭದ್ರತೆಯನ್ನು ಒದಗಿಸಲು ವಾಯುಪಡೆಯ ಶ್ರೀನಗರ ಮತ್ತು ಜಮ್ಮುವಿನ ಕೇಂದ್ರದಲ್ಲಿ ಎನ್ಎಸ್ಜಿ ಪಡೆಯನ್ನು ನಿಯೋಜಿಸಲಾಗಿದೆ ಎಂದು ಎನ್ಎಸ್ಜಿ ಪ್ರಧಾನ ನಿರ್ದೇಶಕ ಎಂ.ಎ.ಗಣಪತಿ ಅವರು ಶನಿವಾರ ತಿಳಿಸಿದರು.
ಭಯೋತ್ಪಾದನೆ ನಿಗ್ರಹ ಮತ್ತು ಅಪಹರಣ ಪ್ರಕರಣಗಳನ್ನು ನಿಭಾಯಿಸಲು ಈ ಪಡೆಯು ಶಕ್ತವಾಗಿದೆ.
ಎನ್ಎಸ್ಜಿ ಪಡೆಯ 37ನೇ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಗಣಪತಿ, ಉಭಯ ಕೇಂದ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಡ್ರೋನ್ ನಿರೋಧಕ ಪರಿಕರಗಳು, ರಾಡಾರ್ಗಳು, ಜಾಮರ್ಗಳು ಹಾಗೂ ಡ್ರೋನ್ ಕಿಲ್ಲರ್ ಗನ್ ಅನ್ನು ಅಳವಡಿಸುವವರೆಗೂ ಈ ಭದ್ರತಾ ಕಾರ್ಯ ಇರಲಿದೆ ಎಂದು ತಿಳಿಸಿದರು.
ಭಾರತೀಯ ವಾಯುಪಡೆಯ ಜಮ್ಮುವಿನ ಕೇಂದ್ರದಲ್ಲಿ ಜೂನ್ 27ರಂದು ಮೊದಲ ಬಾರಿಗೆ ಡ್ರೋನ್ ಮೂಲಕ ದಾಳಿ ನಡೆದಿತ್ತು. ಗಡಿ ಹೊರಗಿನಿಂದ ಬಂದಿದ್ದ ದೂರನಿಯಂತ್ರಿತ ಡ್ರೋನ್ ಮೂಲಕ ಕೇಂದ್ರದ ಮೇಲೆ ಬಾಂಬ್ ಹಾಕಲಾಗಿತ್ತು. ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದು, ಕಟ್ಟಡ ಭಾಗಶಃ ಹಾನಿಗೊಂಡಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ವಾಯುಪಡೆಯ ಎರಡು ಕೇಂದ್ರಗಳು ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿಗೆ ಸಮೀಪದಲ್ಲಿವೆ. ಇವುಗಳನ್ನು ಸೂಕ್ಷ್ಮ ಕೇಂದ್ರಗಳು ಎಂದು ಗುರುತಿಸಲಾಗಿದೆ.

