Dailyhunt
ಕಡಲ ತೀರದ ಸುರಕ್ಷತೆ: ಭಾರತ-ಮಾಲ್ಡೀವ್ಸ್ ಚರ್ಚೆ

ಕಡಲ ತೀರದ ಸುರಕ್ಷತೆ: ಭಾರತ-ಮಾಲ್ಡೀವ್ಸ್ ಚರ್ಚೆ

ಕೊಲಂಬೊ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಅವರು ಇಲ್ಲಿ ಮಾಲ್ಡೀವ್ಸ್ ನ ರಕ್ಷಣಾ ಸಚಿವ ಮರಿಯಾ ದಿದಿ ಅವರ ಜೊತೆಗೆ ಕಡಲ ತೀರದ ಸುರಕ್ಷತೆ ಕುರಿತಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಒಳನಾಡು, ಕಡಲ ತೀರದ ಸುರಕ್ಷತೆ ಕುರಿತಂತೆ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಡುವಣ ತ್ರಿಪಕ್ಷೀಯ ಮಾತುಕತೆಯ ಭಾಗವಾಗಿ ಡೊಭಾಲ್‌ ಮತ್ತು ದಿದಿ ಅವರ ನಡುವೆ ಸಂವಾದ ನಡೆಯಿತು.

ಕಡಲ ತೀರದ ಸುರಕ್ಷತೆ ಕುರಿತು ನಾಲ್ಕನೇ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಣ ತ್ರಿಪಕ್ಷೀಯ ಮಾತುಕತೆಯನ್ನು ಶ್ರೀಲಂಕಾವು, ಭಾರತ ಮತ್ತು ಮಾಲ್ಡೀವ್ಸ್ ಸಹಯೋಗದಲ್ಲಿ ಆಯೋಜಿಸಿದೆ. ಆರು ವರ್ಷಗಳ ನಂತರ ಈ ಸಭೆ ನಡೆಯುತ್ತಿದೆ. ಕಳೆದ ಬಾರಿ 2014ರಲ್ಲಿ ಸಭೆಯು ನವದೆಹಲಿಯಲ್ಲಿ ನಡೆದಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಮಾಲ್ಡೀವ್ಸ್‌ನ ಭಾರತೀಯ ರಾಯಭಾರ ಕಚೇರಿಯು, ಉಭಯ ದೇಶಗಳ ನಡುವೆ ಕಡಲ ತೀರದ ಸುರಕ್ಷತೆ ಕುರಿತು ಸುದೀರ್ಘವಾದ ಚರ್ಚೆ ನಡೆದಿದೆ ಎಂದು ತಿಳಿಸಿದೆ.‌ ಡೊಭಾಲ್‌ ಶುಕ್ರವಾರ ಇಲ್ಲಿಗೆ ಆಗಮಿಸಿದ್ದರು.

ಭಾರತೀಯ ಸಮುದ್ರ ತೀರದ ರಾಷ್ಟ್ರಗಳ ನಡುವಿನ ಉತ್ತಮ ಬಾಂಧವ್ಯ ರೂಪಿಸುವ ಕ್ರಮವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಹಂತದ ಸಭೆ ಪರಿಣಾಮಕಾರಿಯಾದ ವೇದಿಕೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿತ್ತು.

ಶ್ರೀಮಂತ ಸಂಪನ್ಮೂಲವಿರುವ ಭಾರತ ಫೆಸಿಫಿಕ್ ವಲಯದಲ್ಲಿ ತನ್ನ ಪ್ರಭಾವ ಬೀರಲು ಚೀನಾ ಯತ್ನ ನಡೆಸಿರುವ ಹಂತದಲ್ಲಿಯೇ ಈ ಸಭೆ ನಡೆದಿರುವುದು ಗಮನಾರ್ಹವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani