ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮದ ಬಾವಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಅಳ್ಳೊಳ್ಳಿ ಗ್ರಾಮದ ನಿತೀನ್ ಹುಳಗೋಳ (9) ಮೃತ ಬಾಲಕ ಎನ್ನಲಾಗಿದೆ. ಗ್ರಾಮದಲ್ಲಿ ಮೊಹರಂ ಆಚರಣೆ ನಡೆಯುತ್ತಿದ್ದು ಭಾನುವಾರ ಮೊಹರಂ ವೀಕ್ಷಿಸಲು ನಿತೀನ್ ಹುಳಗೋಳ ತೆರಳಿದ್ದ.
ತಡರಾತ್ರಿಯಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ರಾತ್ರಿಯಿಡಿ ಹುಡುಕಾಡಿದರು. ಮಗನ ಸುಳಿವು ಸಿಗದ ಕಾರಣ ಸೇಡಂ ಪೊಲೀಸ್ ಠಾಣೆಗೆ ಕಾಣೆಯಾಗಿರುವ ದೂರನ್ನು ಕುಟುಂಬಸ್ಥರು ನೀಡಿದ್ದರು. ಆದರೆ ಸೋಮವಾರ ಬೆಳಿಗ್ಗೆ ತೆರೆದ ಬಾವಿಯಲ್ಲಿ ನಿತೀನ್ ಮೃತದೇಹ ಪತ್ತೆಯಾಗಿದೆ.
'ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದರ ಹಿಂದೆ ಕೊಲೆಯ ಶಂಕೆ ಇದೆ' ಎಂದು ತಂದೆ ರಾಜೇಂದ್ರ ಹುಳಗೋಳ ದುಃಖ ವ್ಯಕ್ತಪಡಿಸಿ, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಸೇಡಂ ಪೊಲೀಸರು ಭೇಟಿ ನೀಡಿದ್ದಾರೆ.
ಎರಡು ದಿನಗಳಲ್ಲಿ ಮೂವರು ಸಾವು: ಸೇಡಂ ತಾಲ್ಲೂಕಿನ ಮುಗನೂರ ಗ್ರಾಮದ ಹೊಂಡವೊಂದರಲ್ಲಿ ಭಾನುವಾರ ನೀರಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಸೋಮವಾರ ಅಳ್ಳೊಳ್ಳಿ ಗ್ರಾಮದ ಬಾವಿಯಲ್ಲಿ ಬಾಲಕನ ಶವ ಮತ್ತೆಯಾಗಿದೆ. ಎರಡು ದಿನಗಳಲ್ಲಿಯೇ ಮೂರು ಮಂದಿ ನೀರಲ್ಲಿ ಮುಳುಗಿ ಮೃತಪಟ್ಟಂತಾಗಿದೆ.

