ಬೆಂಗಳೂರು: ಕಪ್ಪು ಶಿಲೀಂಧ್ರ ಸೋಂಕು ತಗುಲಿ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಮೈಸೂರಿನ 11 ವರ್ಷದ ಬಾಲಕನಿಗೆ ಹೆಚ್ಚಿನ ತಪಾಸಣೆ ನಡೆಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್) ಸ್ಥಳಾಂತರ ಮಾಡಲಾಗಿದೆ.
ಕೋವಿಡ್ನಿಂದ ಚೇತರಿಸಿಕೊಂಡಿದ್ದ ಬಾಲಕ ಶಿಲೀಂಧ್ರ ಸೋಂಕಿತನಾಗಿ, ಗಂಭೀರವಾಗಿ ಅಸ್ವಸ್ಥಗೊಂಡಿದ್ದ. ಪರೀಕ್ಷೆ ನಡೆಸಿದ ಬೌರಿಂಗ್ ಆಸ್ಪತ್ರೆಯ ವೈದ್ಯರು ಮಿದುಳಿಗೆ ಸೋಂಕು ಹರಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ, ಹೆಚ್ಚಿನ ತಪಾಸಣೆಯ ಸಂಬಂಧ ನಿಮ್ಹಾನ್ಸ್ಗೆ ಶುಕ್ರವಾರ ದಾಖಲಿಸಲಾಗಿದೆ. ಅಲ್ಲಿನ ನರರೋಗ ತಜ್ಞರು ವಿವಿಧ ಪರೀಕ್ಷೆಗಳನ್ನು ನಡೆಸಿ, ಚಿಕಿತ್ಸೆ ನೀಡಲಾರಂಭಿಸಿದ್ದಾರೆ.
ನಗರದಲ್ಲಿ ಹೊಸದಾಗಿ 19 ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ದೃಢಪಟ್ಟಿವೆ.

