Dailyhunt
ಕಸ ವಿಲೇವಾರಿ ಸಮಸ್ಯೆಗೆ ತಿಲಾಂಜಲಿ: ಶಾಸಕ ನೆಹರು ಓಲೇಕಾರ

ಕಸ ವಿಲೇವಾರಿ ಸಮಸ್ಯೆಗೆ ತಿಲಾಂಜಲಿ: ಶಾಸಕ ನೆಹರು ಓಲೇಕಾರ

ಹಾವೇರಿ: 'ನಗರಸಭೆಗೆ 11 ಹೊಸ ಟಿಪ್ಪರ್‌ಗಳು ಬಂದಿದ್ದು, ಹಳೆಯ ಎರಡು ವಾಹನ ಸೇರಿ ಒಟ್ಟು 13 ಟಿಪ್ಪರ್‌ಗಳು ಇನ್ನು ಮುಂದೆ ಕಾರ್ಯನಿರ್ವಹಿಸಲಿವೆ. ಕಸ ವಿಲೇವಾರಿ ಕಾರ್ಯ ವೇಗ ಪಡೆದುಕೊಳ್ಳಲಿದೆ' ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರಸಭೆ ಆವರಣದಲ್ಲಿ ಗುರುವಾರ 11 ಹೊಸ ಟಿಪ್ಪರ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದಲ್ಲಿ ಕಸದ ಸಮಸ್ಯೆ ತೀವ್ರವಾಗಿತ್ತು. ಮನೆ-ಮನೆಯಿಂದ ಕಸ ಸಂಗ್ರಹಿಸುವುದು ತಡವಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದ್ದವು. ಇನ್ನು ಮುಂದೆ ಸ್ವಚ್ಛತಾ ಆಂದೋಲನ ಆರಂಭವಾಗಲಿದೆ. ಕಸದ ಸಮಸ್ಯೆಗೆ ತಿಲಾಂಜಲಿ ಆಡಲಿದ್ದೇವೆ' ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, 'ನಮ್ಮ ಊರು ನಮ್ಮ ಹೊಣೆ' ಎಂಬ ಅಭಿಯಾನಕ್ಕೆ ನಗರದ ಎಲ್ಲ ಜನರು ಸಹಕಾರ ನೀಡಬೇಕು.

11 ಹೊಸ ಟಿಪ್ಪರ್‌ಗಳಿಗೆ ಚಾಲನೆ ನೀಡಿದ್ದು, ಮನೆ-ಮನೆ ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ 3 ಟ್ರ್ಯಾಕ್ಟರ್‌ಗಳನ್ನೂ ಕಸ ವಿಲೇವಾರಿಗೆ ಮೀಸಲಿಡುತ್ತೇವೆ. ಹಸಿ ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ನೀಡುವ ಮೂಲಕ ಜನರು ನಗರದ ನೈರ್ಮಲ್ಯ ಕಾಪಾಡಬೇಕು ಎಂದು ಮನವಿ ಮಾಡಿದರು.

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani