ನವದೆಹಲಿ: 'ಸಿಂಗಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್ ತಳಿ ಅತ್ಯಂತ ಅಪಾಯಕಾರಿ ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು' ಎಂದು ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಿಂಗಪುರ ಜನರು ಆಗ್ರಹಿಸಿದ್ದಾರೆ.
'ಸಿಂಗಪುರದಲ್ಲಿ ಕಂಡು ಬಂದಿರುವ ವೈರಸ್ನ ತಳಿ ಮೂರನೇ ಅಲೆ ರೂಪದಲ್ಲಿ ದೆಹಲಿಯನ್ನು ತಲುಪಬಹುದು. ಕೂಡಲೇ ಸಿಂಗಪುರ ಮತ್ತು ಭಾರತ ನಡುವೆ ವಿಮಾನ ಸಂಚಾರ ರದ್ದುಪಡಿಸುವಂತೆ' ಕೇಜ್ರಿವಾಲ್ ಮಂಗಳವಾರ ಟ್ವೀಟ್ ಮಾಡಿದ್ದರು.
ಸಿಂಗಪುರದ ಪ್ರಮುಖ ಬ್ಲಾಗರ್ ಆಗಿರುವ ಬ್ರೌನ್ ಎಂಬುವವರು, 'ದೆಹಲಿ ಮುಖ್ಯಮಂತ್ರಿಯವರೇ, ವೈರಸ್ನ ಬಿ.1.617 ತಳಿ ನಿಮ್ಮ ದೇಶದಿಂದಲೇ ಬಂದಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

