ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿ ಭಾಗದ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬೆರಟಹಳ್ಳಿ, ತೆರಕಣಾಂಬಿ, ತೆರಕಣಾಂಬಿಹುಂಡಿ, ಬಲಚವಾಡಿ ಗ್ರಾಮಸ್ಥರು ಹಾಗೂ ರೈತರು ಪ್ರತಿಭಟನೆ ನಡೆಸಿದರು.
ತೆರಕಣಾಂಬಿ ಗ್ರಾಮದ ಎಪಿಎಂಸಿ ಮಾರುಕಟ್ಟೆ ಬಳಿ ಪ್ರತಿಭಟನೆ ನಡೆಸಿದ ರೈತರು, ಮೂರು ವರ್ಷಗಳಿಂದಲೂ ಬೆರಟಹಳ್ಳಿ, ತೆರಕಣಾಂಬಿ, ತೆರಕಣಾಂಬಿಹುಂಡಿ, ಬಲಚವಾಡಿ ಕೆರೆಗಳಿಗೆ ನೀರು ಹರಿಸದೆ ಸಮಸ್ಯೆ ಹೆಚ್ಚಾಗಿದ್ದು, ಕೊಳವೆ ಬಾವಿಗಳಲ್ಲಿ ನೀರು ನಿಂತು ಹೋಗಿದೆ.
ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ
ನೀರಿನ ಸಮಸ್ಯೆ ತಲೆದೋರಿದೆ ಎಂದು ದೂರಿದರು.
ಚಾಮರಾಜನಗರ ವ್ಯಾಪ್ತಿಯ ಕೆರೆಗಳಿಗೆ ನೀರು ಬಿಡುವ ಅಧಿಕಾರಿಗಳು ಗುಂಡ್ಲುಪೇಟೆ ಭಾಗದ ಕೆರೆಗಳಿಗೆ ನೀರು ಹರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೃಷಿ ಮಾಡಲು ಸಮಸ್ಯೆ ಉಂಟಾಗಿದೆ. ಕೂಡಲೇ ಕೆರೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ರಸ್ತೆ ತಡೆದು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಕಾರರ ಮನವಿ ಆಲಿಸಿ ಮಾತನಾಡಿದ ನೀರಾವರಿ ಇಲಾಖೆ ಎಇಇ ಮಹೇಶ್, 10 ದಿನಗಳ ಕಾಲಾವಕಾಶ ನೀಡಿ, ನಂತರ ಕೆರೆಗಳಿಗೆ ನೀರು ಬಿಡಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
ರೈತ ಮುಖಂಡರಾದ ಮಹೇಶ್, ಸಿದ್ದಪ್ಪ, ಮಲ್ಲು, ಮಾದಪ್ಪ, ಮಹದೇವಶೆಟ್ಟಿ, ಹುಲಗಪ್ಪ ಸ್ವಾಮಿ, ಸೇರಿದಂತೆ ಹಲವು ಮಂದಿ ರೈತರು ಹಾಗೂ ಭರಟಹಳ್ಳಿ, ತೆರಕಣಾಂಬಿ, ತೆರಕಣಾಂಬಿಹುಂಡಿ, ಬಲಚವಾಡಿ ಗ್ರಾಮಸ್ಥರು ಹಾಜರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260623-37-480750878

