ನಾಯಕನಹಟ್ಟಿ: ಇಲ್ಲಿನ ನಾಡಕಚೇರಿಯಲ್ಲಿ ಯುಪಿಎಸ್ ಕೆಟ್ಟು ವರ್ಷವಾಗಿದೆ. ಹೀಗಾಗಿ ವಿದ್ಯುತ್ ಕಡಿತಗೊಂಡರೆ ಸಿಬ್ಬಂದಿ ಕೆಲಸವಿಲ್ಲದೆ ಕೂರುತ್ತಾರೆ. ಇದರಿಂದ ಸಕಾಲದಲ್ಲಿ ಸೇವೆ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ.
ಸಮಸ್ಯೆಯ ಗಂಭೀರತೆಯ ಅರಿವಿದ್ದರೂ ಅಧಿಕಾರಿಗಳು ಈವರೆಗೂ ಅದನ್ನು ಸರಿಪಡಿಸಿಲ್ಲ.
ಹೊಸ ಯುಪಿಎಸ್ ಖರೀದಿಸುವ ಗೋಜಿಗೂ ಹೋಗಿಲ್ಲ. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾಡಕಚೇರಿ ವ್ಯಾಪ್ತಿಯಲ್ಲಿ 11 ಕಂದಾಯ ಪಿರ್ಕಾ ವೃತ್ತಗಳಿದ್ದು, 45 ರಿಂದ 48 ಹಳ್ಳಿಗಳು ಒಳಪಟ್ಟಿವೆ. ಗ್ರಾಮೀಣ ಭಾಗದ ಜನ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು, ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಜಾತಿ, ಆದಾಯ, ವಂಶವೃಕ್ಷ, ಕೃಷಿ ಕುಟುಂಬ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ, ವಾಸಸ್ಥಳ ದೃಢೀಕರಣ, ಆಧಾರ್ ತಿದ್ದುಪಡಿ ಸೇರಿ ವಿವಿಧ ಕೆಲಸಕ್ಕೆ ಕಚೇರಿಗೆ ಬರುತ್ತಾರೆ. ವಿದ್ಯುತ್ ಇಲ್ಲವಾದರೆ ಇವರು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದ್ದು, ಇದರಿಂದ ರೋಸಿ ಹೋಗಿದ್ದಾರೆ.
ಆಷಾಢ ಮಾಸ ಮತ್ತು ಮಳೆಗಾಲದಲ್ಲಿ ಜೋರಾಗಿ ಬೀಸುವ ಗಾಳಿಯಿಂದಾಗಿ ವಿದ್ಯುತ್ ಕಣ್ಣಾ ಮುಚ್ಚಾಲೆ ಸಾಮಾನ್ಯವಾಗುತ್ತದೆ. ಈ ಅವಧಿಯಲ್ಲೇ ನಾಡಕಚೇರಿಗೆ ನಿತ್ಯ 500ರಿಂದ 600 ಜನ ಭೇಟಿ ಕೊಡುತ್ತಾರೆ. ವಿದ್ಯುತ್ ಕಡಿತಗೊಂಡರೆ ಗಂಟೆಗಟ್ಟಲೆಯಾದರೂ ಬರುವುದೇ ಇಲ್ಲ. ಇದರಿಂದ ಜನ ಕಚೇರಿಯ ಆವರಣದಲ್ಲಿ ಕಾಯುವ ಪರಿಸ್ಥಿತಿ ಎದುರಾಗಿದೆ. ಕೆಲವೊಮ್ಮ ವಿದ್ಯುತ್ ಇದ್ದರೂ ಸರ್ವರ್ ಸಮಸ್ಯೆಯಿಂದಾಗಿ ಮನೆಗೆ ವಾಪಾಸ್ ಹೋಗುವಂತಾಗಿದೆ' ಎಂಬುದು ಸಾರ್ವಜನಿಕರ ಅಳಲು.
ಶಾಲೆ- ಕಾಲೇಜು ಆರಂಭದ ವೇಳೆ ವಿದ್ಯಾರ್ಥಿಗಳು ಜಾತಿ, ಆದಾಯ ಪ್ರಮಾಣ ಪತ್ರಗಳಿಗಾಗಿ ನಾಡಕಚೇರಿಗೆ ಎಡತಾಕುತ್ತಾರೆ. ಕೃಷಿಕರು ವಂಶವೃಕ್ಷ, ಕೃಷಿ ಕುಟುಂಬ ಸೇರಿ ವಿವಿಧ ಪ್ರಮಾಣ ಪತ್ರ ಪಡೆಯಲು, ಮಳೆಗಾಲಕ್ಕೂ ಮುನ್ನ ಜಮೀನಿನ ಸರ್ವೆ ಸೇರಿ ಇತರೆ ಕೆಲಸ ಮಾಡಿಸಿಕೊಳ್ಳಲು, ಬಿತ್ತನೆ ಬೀಜ, ಗೊಬ್ಬರ ಹಾಗೂ ಸರ್ಕಾರದಿಂದ ಸಬ್ಸಿಡಿ ಪಡೆಯಲು ಅಗತ್ಯವಿರುವ ಪಹಣಿ ಸೇರಿ ಇತರೆ ದಾಖಲೆ ಪಡೆಯಲು ಕಚೇರಿಗೆ ಭೇಟಿ ನೀಡುತ್ತಾರೆ.
'ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತು ಯುಪಿಎಸ್ ಕೆಟ್ಟಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಿಂದೆ ಅಟಲ್ ಜನಸ್ನೇಹಿ ಕೇಂದ್ರಕ್ಕಾಗಿ ಅಳವಡಿಸಿದ್ದ ಯುಪಿಎಸ್ ಬ್ಯಾಟರಿಗಳು ವರ್ಷದಿಂದ ಕಾರ್ಯ ಸ್ಥಗಿತಗೊಳಿಸಿವೆ. ಹೀಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯುತ್ ಇದ್ದಾಗ ಮಾತ್ರ ಕೆಲಸ ನಿರ್ವಹಿಸುತ್ತಾರೆ. ಇಲ್ಲವಾದರೆ ಸುಮ್ಮನೆ ಕುಳಿತಿರುತ್ತಾರೆ' ಎಂದು ಎತ್ತಿನಹಟ್ಟಿ ಪ್ರಕಾಶ್ ಹಾಗೂ ಜಿ.ಎಂ.ತಿಪ್ಪೇಸ್ವಾಮಿ ಆರೋಪಿಸುತ್ತಾರೆ.
ಬಿ.ಟಿ.ಪ್ರಕಾಶ್, ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕದ ಅಧ್ಯಕ್ಷ ನಾಡಕಚೇರಿಯ ಯುಪಿಎಸ್ ವರ್ಷದಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಮತ್ತು ರೈತರಿಗೆ ತುಂಬಾ ತೊಂದರಯಾಗು ತ್ತಿದೆ. ಜಿಲ್ಲಾಧಿಕಾರಿ ಇದನ್ನು ಗಂಭೀರ ವಾಗಿ ಪರಿಗಣಿಸಿ ಶೀಘ್ರ ಸಮಸ್ಯೆ ಪರಿಹರಿಸಬೇಕು ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿನಾಯಕನಹಟ್ಟಿ ನಾಡಕಚೇರಿಯಲ್ಲಿ ಸೋಲಾರ್ ಮತ್ತು ಯುಪಿಎಸ್ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. ಇದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ತಹಶೀಲ್ದಾರ್ ಮೂಲಕ ಶೀಘ್ರ ಸಮಸ್ಯೆ ಪರಿಹರಿಸಲಾಗುವುದುಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-44-497815531

