Dailyhunt

ಕ್ಲಬ್‌ನಲ್ಲಿ ಜೂಜಾಟ; ಇನ್‌ಸ್ಪೆಕ್ಟರ್ ತಲೆದಂಡ

ಬೆಂಗಳೂರು: ಕ್ಲಬ್‌ನಲ್ಲಿ ಅಕ್ರಮವಾಗಿ ಜೂಜಾಟ ನಡೆಯುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಸಂಪಿಗೆಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಎಚ್‌.ಬಿ. ಸುರೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಠಾಣೆ ವ್ಯಾಪ್ತಿಯಲ್ಲಿರುವ 'ಕಿಂಗ್ಸ್ ವಿನ್ನರ್ಸ್' ಕ್ಲಬ್‌ ಮೇಲೆ ಸೆ.

4ರಂದು ಸಿಸಿಬಿ ಪೊಲೀಸರ ತಂಡ ದಾಳಿ ಮಾಡಿತ್ತು. ಅಕ್ರಮವಾಗಿ ಜೂಜು ಆಡುತ್ತಿದ್ದವರನ್ನು ಬಂಧಿಸಿತ್ತು. ನಗದು ಜಪ್ತಿ ಮಾಡಿತ್ತು. ಈ ಬಗ್ಗೆ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು.

'ಸದಸ್ಯರಲ್ಲದ ವ್ಯಕ್ತಿಗಳು ಕ್ಲಬ್‌ಗೆ ಬಂದು ಜೂಜು ಆಡುತ್ತಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿರಲಿಲ್ಲ. ನಮಗೆ ಮಾಹಿತಿ ಬರುತ್ತಿದ್ದಂತೆ ಕ್ಲಬ್‌ ಮೇಲೆ ದಾಳಿ ಮಾಡಿ ಅಕ್ರಮ ಬಯಲು ಮಾಡಲಾಗಿದೆ. ಜೂಜಾಟ ತಡೆಯುವಲ್ಲಿ ಇನ್‌ಸ್ಪೆಕ್ಟರ್ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ' ಎಂದು ಸಿಸಿಬಿ ಪೊಲೀಸರು, ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ವರದಿ ಸಲ್ಲಿಸಿದ್ದರು.

ವರದಿ ಪರಿಶೀಲಿಸಿದ ಕಮಿಷನರ್, ಇನ್‌ಸ್ಪೆಕ್ಟರ್ ಸುರೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇನ್‌ಸ್ಪೆಕ್ಟರ್ ವಿರುದ್ಧ ಇಲಾಖೆ ವಿಚಾರಣೆ ನಡೆಸುವಂತೆ ಈಶಾನ್ಯ ವಿಭಾಗದ ಡಿಸಿಪಿ ಅವರಿಗೆ ಸೂಚಿಸಿದ್ದಾರೆ.

ಕೆಲದಿನಗಳ ಹಿಂದಷ್ಟೇ ಹಾಜರು: 'ಬೇರೆ ಠಾಣೆಯಲ್ಲಿದ್ದ ಸುರೇಶ್‌ ಅವರನ್ನು ಸಂಪಿಗೆಹಳ್ಳಿ ಠಾಣೆಗೆ ಇತ್ತೀಚೆಗಷ್ಟೇ ವರ್ಗಾವಣೆ ಮಾಡಲಾಗಿತ್ತು. ಸಿಸಿಬಿ ದಾಳಿ ನಡೆಯುವುದಕ್ಕೂ ಕೆಲದಿನಗಳ ಹಿಂದಷ್ಟೇ ಇನ್‌ಸ್ಪೆಕ್ಟರ್ ಕರ್ತವ್ಯಕ್ಕೆ ಹಾಜರಾಗಿದ್ದರು' ಎಂದು ಠಾಣೆ ಮೂಲಗಳು ಹೇಳಿವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani