
ನವದೆಹಲಿ: ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಯುವ ಕುಸ್ತಿಪಟುವಿನ ಕೊಲೆ ಪ್ರಕರಣದಲ್ಲಿ ಭಾನುವಾರ ದೆಹಲಿ ಪೋಲಿಸರು ಬಂಧಿಸಿದ್ದಾರೆ.
ಇತ್ತೀಚೆಗೆ ಸುಶೀಲ್ ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನನ್ನು ದೆಹಲಿಯ ನ್ಯಾಯಾಲಯ ನಿರಾಕರಿಸಿತ್ತು.
ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಅವರ ಕುಮ್ಮಕ್ಕು ಇರುವುದು ಸ್ಪಷ್ಟವಾಗುತ್ತಿದೆ. ಅವರ ವಿರುದ್ಧದ ಆರೋಪ ಗಂಭೀರವಾದದ್ದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು. ಕೊಲೆ ಪ್ರಕರಣ ಬಹಿರಂಗ ಆಗುತ್ತಿದ್ದಂತೆ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದರು.
ರಾಷ್ಟ್ರ ರಾಜಧಾನಿಯ ಕ್ರೀಡಾಂಗಣವೊಂದರಲ್ಲಿ ಮೇ ನಾಲ್ಕರಂದು ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಸಾವಿಗೀಡಾಗಿದ್ದರು. ಅವರ ಗೆಳೆಯರಾದ ಸೋನು ಮತ್ತು ಅಮಿತ್ ಕುಮಾರ್ಗೆ ಗಾಯವಾಗಿತ್ತು.
ಸುಶೀಲ್ ಕುಮಾರ್ ಮತ್ತು ಇತರ ಕೆಲವರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಯುತ್ತಿದ್ದು ಆರೋಪಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು.