ಸಂತೇಮರಹಳ್ಳಿ: ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಮೋಳೆಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು. ಹೊಸಮೋಳೆ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಸೌಲಭ್ಯಗಳಿಂದ ವಂಚಿತವಾಗಿರುವ ಮೋಳೆಗಳನ್ನು ಗುರುತಿಸಲಾಗಿದ್ದು, 3 ವರ್ಷಗಳಿಂದ ಮೋಳೆಗಳನ್ನು ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ₹20 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ನಡುಕಲಮೋಳೆ, ಕಾವುದವಾಡಿ, ತೆಳ್ಳನೂರು, ಬಾಣಹಳ್ಳಿ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿಯನ್ನು ₹2.18 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿದ್ದು, ಕಾಮಗಾರಿಯನ್ನು ಕೆಆರ್ಐಡಿಎಲ್ ಸಂಸ್ಥೆಗೆ ವಹಿಸಲಾಗಿದೆ. ಬಡಾವಣೆ ನಿವಾಸಿಗಳು ಆಡಚಣೆಯಾಗದಂತೆ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಅಧಿಕಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ನಿವಾಸಿಗಳ ಮನವಿ: ಗ್ರಾಮದಲ್ಲಿ ಎಲ್ಲ ಮನೆಗಳಿಗೆ ಜಲಜೀವನ್ ಮೀಷನ್ ಯೋಜನೆಯಡಿ ಪೈಪ್ಲೈನ್ ಮೂಲಕ ನೀರು ಒದಗಿಸಲಾಗುತ್ತಿದೆ. ಆದರೆ ನಮ್ಮ ಬೀದಿಗೆ ಇನ್ನೂ ಅಧಿಕಾರಿಗಳು ಪೈಪ್ಲೈನ್ ಕಾಮಗಾರಿ ಮಾಡಿಲ್ಲ. ರಸ್ತೆ ಕಾಮಗಾರಿ ಆರಂಭಿಸುವ ಮೊದಲು ಪೈಪ್ಲೈನ್ ಕಾಮಗಾರಿ ಮಾಡಿಸಿ, ಬೀದಿಯಲ್ಲಿರುವ ಇನ್ನೊಂದು ರಸ್ತೆಯನ್ನು ಅಭಿವೃದ್ಧಿ ಪಡಿಸಿಕೊಡಬೇಕು ಎಂದು ನಿವಾಸಿಗಳು ಶಾಸಕರಲ್ಲಿ ಮನವಿ ಮಾಡಿದರು. ಶಾಸಕರು ಸ್ಥಳದಲ್ಲೇ ಜಲ ಜೀವನ್ ಮೀಷನ್ ಯೋಜನೆಯ ಜೆಇ ಪುರುಷೋತ್ತಮ ಅವರಿಗೆ ಸೂಚನೆ ನೀಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಿಲ್ಪ, ಮಾದೇಶ್, ಸದಸ್ಯ ಸೋಮಣ್ಣ, ಪ್ರಜಾಪ್ರತಿನಿಧಿ ಅಧ್ಯಕ್ಷ ಸಂತೇಮಹಳ್ಳಿ ಮಹದೇವಪ್ರಸಾದ್, ಮುಖಂಡರಾದ ನಂಜುಂಡಶೆಟ್ಟಿ, ನಾಗರಾಜಶೆಟ್ಟಿ, ಗೋವಿಂದಶೆಟ್ಟಿ, ಮರಿಸ್ವಾಮಿಶೆಟ್ಟಿ, ಚುಂಗಡಿಪುರ ಲಕ್ಷ್ಮಣ್ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-37-379622786

