ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದ ಪಾರ್ಟಿ ಹಾಲ್ ಹಿಂಭಾಗದಲ್ಲಿ ಜೂಜಾಡುತ್ತಿದ್ದ 37 ಮಂದಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಸುಪ್ರೀತ್ ಸಿಬ್ಬಂದಿ ಜತೆ ದಾಳಿ ನಡೆಸಿ, ಪಣಕಿಟ್ಟಿದ್ದ ₹3.12 ಲಕ್ಷ ನಗದನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲ್ಲೂಕಿನ ಶಿವನಸಮುದ್ರದ ಮಾರಮ್ಮ ದೇವಸ್ಥಾನದ ಸಮೀಪ ಜೂಜಾಡತ್ತಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿ, ಪಣಕಿಟ್ಟಿದ್ದ ₹3,500 ನಗದು ವಶಪಡಿಸಿಕೊಂಡಿದ್ದಾರೆ.
ಶಿವನಸಮುದ್ರದ ಮಾರಮ್ಮ ದೇವಸ್ಥಾನದ ಪಾರ್ಟಿ ಹಾಲ್ನಲ್ಲಿ ಜೂಜಾಡುತ್ತಿದ್ದ 7 ಮಂದಿಯನ್ನು ಬಂಧಿಸಿ, ₹ 61 ಸಾವಿರ ನಗದನ್ನು ವಶಕ್ಕೆ ಪಡೆದಿದ್ದಾರೆ.
ಸಿಪಿಐ ರವೀಂದ್ರ, ಗ್ರಾಮಾಂತರ ಠಾಣೆಯ ಎಸ್ಐ ಸುಪ್ರೀತ್, ಕ್ರೈಂ ವಿಭಾಗದ ಎಸ್ಐ ಚಲುವರಾಜು, ಟೌನ್ ಕ್ರೈಂ ಎಸ್ಐ ಉಮಾವತಿ ಹಾಗೂ ಸಿಬ್ಬಂದಿ ರಂಗಸ್ವಾಮಿ, ರಾಜೇಶ್ ಪೂಜಾರಿ, ಲಿಂಗರಾಜು, ಜುನೈದ್, ಬಸವರಾಜು, ನಾಗೇಂದ್ರ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260623-37-886630178

