Tuesday, 04 May, 7.25 pm ಪ್ರಜಾವಾಣಿ

ರಾಯಚೂರು
ಕೋವಿಡ್ ಲಸಿಕೆ ಹಾಕುವ ಕಾರ್ಯ ಮಂದಗತಿ

ಸಿಂಧನೂರು: ಸಿಂಧನೂರು ತಾಲ್ಲೂಕಿನಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಾಚರಣೆ ಮಂದಗತಿಯಿಂದ ಸಾಗಿದೆ.

ತಾಲ್ಲೂಕಿನಲ್ಲಿ 4,18,758 ಜನಸಂಖ್ಯೆಯಿದ್ದು, ಅದರಲ್ಲಿ 79 ಸಾವಿರ 45 ವಯಸ್ಸಿಗಿಂತ ಮೇಲ್ಪಟ್ಟರಿದ್ದಾರೆ. ಪ್ರಾರಂಭದಲ್ಲಿ ಲಸಿಕೆ ಹಾಕಿಕೊಳ್ಳಲು ಮೀನಾಮೇಷ ಮಾಡಿದ ಜನರು ಇತ್ತೀಚಿಗೆ ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಲಸಿಕೆ ಲಭ್ಯವಾಗುತ್ತಿಲ್ಲ ಎನ್ನುವುದು ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿಯ ಸಿಬ್ಬಂದಿಯ ಅಳಲು.

'ಇತರೆ ತಾಲ್ಲೂಕಿಗೆ ಹೋಲಿಸಿದರೆ ಲಸಿಕೆ ಹಾಕುವ ಗುರಿಯಲ್ಲಿ ಸಿಂಧನೂರು ಪ್ರಥಮ ಸ್ಥಾನದಲ್ಲಿದೆ. ಶೇ 84ರಷ್ಟು ಗುರಿ ಸಾಧಿಸಿದ್ದೇವೆ. ಎರಡು ಸಾವಿರ ಡೋಜ್ ಜಿಲ್ಲಾ ಕಚೇರಿಯಿಂದ ಹಂಚಿಕೆಯಾದರೆ ಒಂದೇ ದಿನದಲ್ಲಿ ಮುಗಿದು ಬಿಡುತ್ತದೆ. ಈಗಾಗಲೇ 38 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ. ಮಾರ್ಚ್ 8 ರಿಂದ ಆರಂಭವಾಗಿದ್ದು, ಇಲ್ಲಿಯವರೆಗೆ 30 ಸಾವಿರ ಜನ ಪ್ರಥಮ ಹಂತದ ಲಸಿಕೆ ಪಡೆದಿದ್ದಾರೆ. 6 ಸಾವಿರ ಜನ ಮಾತ್ರ ಎರಡನೇ ಹಂತದ ಲಸಿಕೆ ಪಡೆದಿದ್ದಾರೆ. ಹೆಚ್ಚಿನ ಲಸಿಕೆ ಬಂದರೆ ಪ್ರತಿನಿತ್ಯ ಕೆಲಸ ಮಾಡಿ ಇನ್ನೂ ಹೆಚ್ಚಿನ ಜನರಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತದೆ' ಎಂದು ಪ್ರಭಾರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜೀವನೇಶ್ವರ ಹೇಳುತ್ತಾರೆ.

ಸೋಂಕು ಇಳಿಮುಖ: ಕಳೆದ 15 ದಿನದಿಂದ ಅತ್ಯಂತ ಏರುಗತಿಯಲ್ಲಿದ್ದ ಕೊರೊನಾ ಸೋಂಕು ಎರಡು ದಿನದಿಂದ ಸ್ವಲ್ಪ ಇಳಿಮುಖವಾಗಿದೆ. ನಿತ್ಯ ಸರಾಸರಿ 100ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢವಾಗುತ್ತಿತ್ತು. ಈಗ 50 ಕ್ಕಿಂತ ಕಡಿಮೆಯಾಗಿದೆ. ಆದಾಗ್ಯೂ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ 25 ಸೋಂಕಿತರು, ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 68 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ 14 ಜನ ಹೃದ್ರೋಗ ತಜ್ಞರಿದ್ದು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಂದಿದ್ದಾರೆ. ಆದರೆ ಆಕ್ಸಿಜನ್ ಕೊರತೆ ಇರುವುದರಿಂದ ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಅನುಮತಿ ನೀಡುವ ಕುರಿತು ಚರ್ಚಿಸಲಿದ್ದಾರೆಂದು ತಾಲ್ಲೂಕು ಪ್ರಭಾರಿ ವೈದ್ಯಾಧಿಕಾರಿ ತಿಳಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top