ಮಂಡ್ಯ: 'ನಾನು ಇರುವವರೆಗೂ ಲೋಕಾಯುಕ್ತ ಸಂಸ್ಥೆ ಬಲಹೀನಗೊಳಿಸಲು ಬಿಡುವುದಿಲ್ಲ. ಸಂಸ್ಥೆ ಬಗ್ಗೆ ಹಗುರವಾಗಿ ಮಾತನಾಡುವುದು, ಸುಳ್ಳು ಆರೋಪ ಮಾಡಿದರೆ ಬಿಡುವುದಿಲ್ಲ. ನಾನು ತಪ್ಪು ಮಾಡಿದ್ದರೆ ನನ್ನ ತಲೆ ಕಡಿದುಕೊಡಲು ಸಿದ್ಧ' ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
ಶುಕ್ರವಾರ ಇಲ್ಲಿ 'ಬಾಕಿ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮ'ದಲ್ಲಿ ಮಾತನಾಡಿ, 'ಲೋಕಾಯುಕ್ತ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಹಣ ವಸೂಲಿ ನಡೆದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಗಮನಕ್ಕೆ ಬಂದಿದೆ. ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇನೆ' ಎಂದರು.
'ಹಣ ವಸೂಲಿ ಮಾಡಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ ಯೂಟ್ಯೂಬರ್ಗಳಿಗೆ ಮತ್ತು ಆರೋಪ ಮಾಡಿದ ಸಂಘಟನೆ ಮುಖಂಡರಿಗೆ ನೋಟಿಸ್ ಕೊಟ್ಟಿದ್ದೇವೆ. ಆರೋಪಕ್ಕೆ ಸಾಕ್ಷ್ಯಾಧಾರ ಕೊಡದಿದ್ದರೆ ಸ್ವಯಪ್ರೇರಿತವಾಗಿ ಪ್ರಕರಣ ದಾಖಲಿಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.
'ಕೆಲ ಸಂಘಟನೆಗಳು ಧ್ಯೇಯೋದ್ದೇಶ ಮರೆತು ಸುಳ್ಳು ಆರೋಪಗಳಲ್ಲಿ ತೊಡಗಿವೆ. ಶೋಷಿತರ ಪರ ಧ್ವನಿಯಾಗಲಿ. ಸಾಮಾಜಿಕ ಸಮಸ್ಯೆ ನಿವಾರಿಸಲು ಹೋರಾಡಲಿ, ಅದನ್ನು ಬಿಟ್ಟು ಸ್ವಾರ್ಥಕ್ಕೆ ಬೇರೆಯವರನ್ನು ತೆಗಳಬೇಡಿ' ಎಂದರು.
'ಭಗವಂತನೇ ಎದುರು ನಿಂತರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಕೆಲಸ ಮಾಡುವುದಿಲ್ಲ. ಪ್ರಧಾನಿಯೊಬ್ಬರು ಮತ್ತು ಸಿಜೆಐಯೊಬ್ಬರು ಹೇಳಿದರೂ ನ್ಯಾಯ ಬಿಟ್ಟು ಕೆಲಸ ಮಾಡಲು ನಾನು ಒಪ್ಪಿಲ್ಲ' ಎಂದು ಹೇಳಿದಾಗ, ಅಲ್ಲಿದ್ದವರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.

