ಬೀಜಿಂಗ್: ಪಶ್ಚಿಮ ಏಷ್ಯಾ ಸಂಘರ್ಷ ಶಮನಕ್ಕೆ ಮಧ್ಯಸ್ಥಿಕೆ ಕುರಿತಂತೆ ಭಾರತ ಮತ್ತು ಪಾಕಿಸ್ತಾನದ ಹೋಲಿಕೆಯನ್ನು ತಿರಸ್ಕರಿಸಿರುವ ಚೀನಾಕ್ಕೆ ಭಾರತದ ರಾಯಭಾರಿ ವಿಕ್ರಂ ದೊರೈಸ್ವಾಮಿ, ತಮ್ಮ ಹಿತಾಸಕ್ತಿಗಳಿಗೆ ಪೂರಕವಾಗಿದೆಯೇ ಎಂಬುದರ ಆಧಾರದ ಅದನ್ನು ಆಯಾ ದೇಶಗಳೇ ನಿರ್ಧರಿಸುತ್ತವೆ ಎಂದಿದ್ದಾರೆ.
'ನಾನು ಸ್ವಲ್ಪ ನೇರವಾಗಿ ಹೇಳಬಹುದಾದರೂ, ಪಾಕಿಸ್ತಾನದೊಂದಿಗೆ ಭಾರತದ ಹೋಲಿಕೆ ಸೂಕ್ತವಲ್ಲ. ಎರಡೂ ದೇಶಗಳ ಆರ್ಥಿಕತೆಯೇ ನಿಮಗೆ ಬಹಳಷ್ಟು ಹೇಳುತ್ತದೆ ಎಂದು ನಾನು ಭಾವಿಸುತ್ತೇನೆ'ಎಂದು ಜಾಗತಿಕ ನಾಯಕತ್ವದಲ್ಲಿ ಭಾರತದ ಪಾತ್ರ ಮತ್ತು ಇರಾನ್-ಅಮೆರಿಕ ಸಂಘರ್ಷದಲ್ಲಿ ಪಾಕ್ ಮಧ್ಯಸ್ಥಿಕೆ ಬಗ್ಗೆ ಚೀನಾದ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
ಚೀನಾದ ತ್ಸಿಂಗುವಾ ವಿಶ್ವವಿದ್ಯಾಲಯವು ಇಲ್ಲಿ ಆಯೋಜಿಸಿದ್ದ ವಿಶ್ವ ಶಾಂತಿ ವೇದಿಕೆಯಲ್ಲಿ ದೊರೈಸ್ವಾಮಿ ಮಾತನಾಡುತ್ತಿದ್ದರು.
'ದೇಶಗಳು ಎಷ್ಟು ಅಭಿವೃದ್ಧಿಯಾಗಿವೆ ಮತ್ತು ಜಾಗತಿಕ ವ್ಯವಸ್ಥೆಯಲ್ಲಿ ಅವುಗಳ ಪಾತ್ರ ಏನು ಎಂಬುದರ ಪ್ರಕಾರ ನೋಡಬೇಕು'ಎಂದು ಅವರು ಹೇಳಿದರು, ಜಗತ್ತಿನೊಂದಿಗೆ ಭಾರತದ ಏಕೀಕರಣವು ಹೆಚ್ಚಿನ ದೇಶಗಳಿಗೆ ಹೊಂದಿಕೆಯಾಗದ ಮಟ್ಟದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
'ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ವಿರಾಮಕ್ಕೆ ಬೇಕಾದ ಎಲ್ಲವನ್ನೂ ಮಾಡಲು ನಾವು ಸಿದ್ಧರಿದ್ದೇವೆ. ನೀವು ಮಧ್ಯಸ್ಥಿಕೆ ಬಗ್ಗ ಪ್ರಶ್ನೆ ಕೇಳುತ್ತಿದ್ದೀರಿ. ಅದನ್ನು ಆಯಾ ದೇಶಗಳೇ ಸಾಧಕ ಬಾಧಕಗಳ ಆಧಾರದ ಮೇಲೆ ನಿರ್ಧರಿಸುತ್ತವೆ'ಎಂದಿದ್ದಾರೆ.
ಈ ಹಿಂದೆ ಯುದ್ಧ ಶಮನದಲ್ಲಿ ನಮ್ಮ ಪಾತ್ರ ನಿರ್ವಹಿಸಿದ್ದೇವೆ. ಈ ಸಂದರ್ಭ ಮಧ್ಯಪ್ರವೇಶ ಸೂಕ್ತವಲ್ಲ ಎಂದಿದ್ದಾರೆ.
ಅಲ್ಲದೇ, ಪಶ್ಚಿಮ ಏಷ್ಯಾ ಅಥವಾ ಪೂರ್ವ ಯುರೋಪಿನಲ್ಲಿನ(ಉಕ್ರೇನ್) ಇತ್ತೀಚಿನ ಬಿಕ್ಕಟ್ಟುಗಳಲ್ಲಿ ನಮ್ಮ ಸ್ಥಾನವು ಚೀನಾದಂತೆಯೇ ಇದೆ ಎಂದ ಅವರು, ಚೀನಾ ಅಥವಾ ಭಾರತ ವಾಸ್ತವವಾಗಿ ಮಧ್ಯಸ್ಥಿಕೆಗೆ ಮುಂದೆ ಬಂದಿಲ್ಲ ಎಂದು ಹೇಳಿದ್ದಾರ.

