ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಜನರು ತಮ್ಮ ಜಮೀನಿನಲ್ಲಿ ಬಿತ್ತನೆಯನ್ನೂ ಮಾಡದೆ, ಉದ್ಯೋಗ ಹುಡುಕಿಕೊಂಡು ಗುಳೇ ಹೋಗಲು ಆರಂಭಿಸಿದ್ದಾರೆ.
ಗುರುವಾರ ರಾತ್ರಿ ತಾಲ್ಲೂಕಿನ ಶ್ರೀಕಂಠಾಪುರ ತಾಂಡಾದ ಅನೇಕ ಮಂದಿ ಮೂರು ಲಾರಿಗಳಲ್ಲಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ತುಂಬಿಕೊಂಡು ಗುಳೇ ಹೋರಟರು.
ತಾಲ್ಲೂಕಿನ ವಿವಿಧ ಗ್ರಾಮ ಹಾಗೂ ತಾಂಡಾಗಳಲ್ಲಿ ಪ್ರತಿ ವರ್ಷ ಜನರು ಗುಳೇ ಹೋಗುವುದು ಸಾಮಾನ್ಯ. ಆದರೆ ಗುಳೇ ಹೋಗುವುದಕ್ಕೆ ಮೊದಲಾಗಿ ಇರುವ ಅಲ್ಪ ಸ್ವಲ್ಪ ಜಮೀನುಗಳಲ್ಲಿ ಬಿತ್ತನೆ ಮಾಡಿ ಹೋಗುತ್ತಿದ್ದರು. ಆದರೆ ಈ ಬಾರಿ ಸಮರ್ಪಕವಾಗಿ ಮಳೆ ಇಲ್ಲದ ಕಾರಣ ಅನೇಕ ಹೊಲಗಳಲ್ಲಿ ಇನ್ನೂ ಬಿತ್ತನಯೇ ಮಾಡಿಲ್ಲ. ಅಲಲ್ಲಿ ಬಿತ್ತನೆ ಮಾಡಿದ್ದ ಎಳ್ಳು ಹಾಗೂ ಜೋಳ ಮಳೆ ಇಲ್ಲದೆ ಒಣಗಿ ಹೋಗಿದೆ. ಇದರಿಂದ ಈ ಬಾರಿ ಬೇಗನೆ ಗುಳೇ ಹೋಗಲು ಆರಂಭಿಸಿದ್ದಾರೆ.
'ಪ್ರತಿ ಬಾರಿಯೂ ನಮ್ಮಲ್ಲಿನ ಜನ ಗುಳೇ ಹೋಗುತ್ತಾರೆ. ಆದರೆ ಈ ಬಾರಿ ಮಳೆ ಅಭಾವದ ಕಾರಣ ಇಲ್ಲಿ ಕೆಲಸವಿಲ್ಲ. ಜನ ಕೆ.ಆರ್. ಪೇಟೆ, ಕಿಕ್ಕೇರಿ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಕಡೆ ಕಬ್ಬು ಕಟಾವು ಮಾಡಲು ಹೊರಟಿದ್ದಾರೆ. ಇನ್ನೊಂದು ವಾರದಲ್ಲಿ ಅನೇಕರು ಗುಳೇ ಹೋಗಲಿದ್ದಾರೆ ಎಂದು ಶ್ರೀಕಂಠಾಪುರ ತಾಂಡಾದ ತಾಲ್ಲೂಕು ಬಂಜಾರ ಮುಖಂಡ ವೆಂಕಟೇಶ್ ನಾಯ್ಕ್ ಹೇಳಿದರು.

