ತುಮಕೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಿಮ್ಮ ಜತೆಯಲ್ಲಿ ಇರುವವರಿಗೆ ಉದಾರವಾಗಿ ವರ್ತಿಸುವಂತೆ ಹೇಳಿ. ಆ ಮೇಲೆ ನಮ್ಮ ಪರಿಶೀಲನೆ ನಡೆಸಿ' ಎಂದು ನೇರವಾಗಿ ಹೇಳಿದ್ದಾರೆ.
ಸೋಮವಾರ ಸಂಜೆ ಕೋವಿಡ್ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಜತೆಗೆ ನಡೆದ ವಿಡಿಯೊ ಸಂವಾದದಲ್ಲಿ ಸಚಿವರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದಿದ್ದಾರೆ. 'ಮೊದಲು ನಮ್ಮ ಸಮಸ್ಯೆ ಪರಿಹರಿಸಿ. ನಂತರ ಪರಿಶೀಲನೆ ನಡೆಸಿ' ಎಂದು ಜೋರಾಗಿಯೇ ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.
'ಹಿಂದೆಯೇ ಜಿಲ್ಲೆಯಲ್ಲಿ ಆಮ್ಲಜನಕದ ಒಂದು ಪ್ಲಾಂಟ್ ನಿರ್ಮಾಣಕ್ಕೆ ಅನುಮತಿ ನೀಡಿದ್ದರೆ ಈ ವೇಳೆಗೆ ಉತ್ಪಾದನೆ ಆರಂಭವಾಗುತ್ತಿತ್ತು.
'ಜಿಲ್ಲೆ ಸಮಸ್ಯೆಗಳಿಗೆ ಒಂದು ತಿಂಗಳಿನಿಂದ ಸಣ್ಣ ಪರಿಹಾರವೂ ಸಿಕ್ಕಿಲ್ಲ. ಒಮ್ಮೆ ಮಾಡಿ ಎನ್ನುತ್ತೀರಿ. ಇನ್ನೊಮ್ಮೆ ಮಾಡಬೇಡಿ ಎನ್ನುತ್ತೀರಿ. ಹೀಗಾದರೆ ನಾವು ಕೆಲಸ ಮಾಡುವುದಾದರೂ ಹೇಗೆ' ಎಂದಿದ್ದಾರೆ.
ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಾದ ಸಮಯದಲ್ಲಿ ಮುಖಂಡರೊಬ್ಬರು ಪ್ರಶ್ನಿಸಿದಾಗ, 'ಮುಖ್ಯಮಂತ್ರಿ ಕೇಳಿ ಆಮ್ಲಜನಕ ಪಡೆದುಕೊಳ್ಳಿ' ಎಂದು ಸಚಿವರು ಹೇಳಿದ್ದು ವಿವಾದಕ್ಕೆ ಸಿಲುಕಿತ್ತು.

