ಬೆಂಗಳೂರು: ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಇದ್ದು, ಬೇಸಿಗೆ ಬೇಗೆ ಇನ್ನಷ್ಟು ಬಿರುಸುಗೊಳ್ಳಲಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಮುಂಗಾರು ಮುನಿಸು | ಜುಲೈಗೆ ಕಾಲಿಡುವ 'ಎಲ್ ನಿನೋ': ತಪ್ಪದ ಬಿಸಿಲ ಬೇಗೆ
ಒಂದು ಸಾಲಿನಲ್ಲಿಜುಲೈನಲ್ಲಿ ಎಲ್ ನಿನೋ ಪ್ರಭಾವದಿಂದ ಮುಂಗಾರು ಮಳೆ ಕೊರತೆಯಾಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.ಪ್ರಮುಖ ಅಂಶಗಳು• ತಾಪಮಾನದಲ್ಲಿ ಏರಿಕೆರಾಜ್ಯದಲ್ಲಿ ವಾಡಿಕೆಗಿಂತ 0.5 ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದ್ದು, ಶೇ 60-70ರಷ್ಟು ತೇವಾಂಶದಿಂದಾಗಿ ಬಿಸಿಲಿನ ಬೇಗೆ ಅಧಿಕವಾಗಿ ಭಾಸವಾಗುತ್ತಿದೆ.• ಎಲ್ ನಿನೋ ಪರಿಣಾಮಜುಲೈನಲ್ಲಿ ಎಲ್ ನಿನೋ ಆಗಮನದಿಂದಾಗಿ ಮುಂಗಾರು ಮಳೆಯ ಸರಾಸರಿ ಪ್ರಮಾಣ ಶೇ 92ಕ್ಕೆ ಕುಸಿಯುವ ಸಾಧ್ಯತೆಯಿದೆ, ಇದರಿಂದ ಮಳೆ ಕೊರತೆ ಉಂಟಾಗಬಹುದು.• ಜಲಾಶಯಗಳಲ್ಲಿ ನೀರಿನ ಸಂಗ್ರಹಕಳೆದ ವರ್ಷದ ಉತ್ತಮ ಮುಂಗಾರು ಮಳೆಯಿಂದಾಗಿ ಪ್ರಸ್ತುತ ಜಲಾಶಯಗಳಲ್ಲಿ ನೀರಿನ ಸಂಗ್ರಹವಿದ್ದು, ಬೇಸಿಗೆಯ ಕುಡಿಯುವ ನೀರು ಮತ್ತು ಕೃಷಿಗೆ ಸದ್ಯಕ್ಕೆ ಸಮಸ್ಯೆ ಇಲ್ಲ.• ಮಳೆ ಸುಧಾರಣೆಗೆ ಆಶಾದಾಯಕ ಅಂಶಗಳುಪಿಐಒಡಿ (PIOD) ವಿದ್ಯಮಾನ ಮತ್ತು ಹಿಮ ಕರಗುವಿಕೆ ಪ್ರಕ್ರಿಯೆಗಳು ಎಲ್ ನಿನೋ ಪ್ರಭಾವವನ್ನು ತಗ್ಗಿಸಿ ಉತ್ತಮ ಮಳೆ ತರುವ ಸಾಧ್ಯತೆಯನ್ನು ಹುಟ್ಟುಹಾಕಿವೆ.• ಅಂತಿಮ ಮುನ್ಸೂಚನೆಭಾರತೀಯ ಹವಾಮಾನ ಇಲಾಖೆಯು ಮೇ ತಿಂಗಳಾಂತ್ಯದಲ್ಲಿ ಸಮಗ್ರ ವರದಿಯನ್ನು ಬಿಡುಗಡೆ ಮಾಡಲಿದ್ದು, ಆಗ ಮುಂಗಾರಿನ ನಿಖರ ಚಿತ್ರಣ ಲಭ್ಯವಾಗಲಿದೆ.ಪ್ರಮುಖ ಅಂಕಿಅಂಶಗಳು0.5 ಡಿಗ್ರಿ ಸೆಲ್ಸಿಯಸ್ನಿಂದ 3 ಡಿಗ್ರಿ ಸೆಲ್ಸಿಯಸ್ತಾಪಮಾನ ವ್ಯತ್ಯಾಸಶೇ 92ಅಂದಾಜು ಮಳೆಯ ಪ್ರಮಾಣಶೇ 60ರಿಂದ ಶೇ 70ತೇವಾಂಶದ ಪ್ರಮಾಣಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಕಳೆದ ಎರಡು- ಮೂರು ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ ವಾಡಿಕೆಗಿಂತ 0.5 ಡಿಗ್ರಿ ಸೆಲ್ಸಿಯಸ್ನಿಂದ 3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿದೆ. ಇದರ ಜತೆ ಹವೆಯಲ್ಲಿ ಶೇ 60ರಿಂದ ಶೇ 70ರಷ್ಟು ತೇವಾಂಶವೂ ಸೇರಿರುವ ಕಾರಣ, ತಾಪಮಾನ ಅಧಿಕ ಎಂಬಂತೆ ಭಾಸವಾಗುತ್ತಿದೆ. ವಾಸ್ತವದಲ್ಲಿ 38 ಡಿಗ್ರಿ ಸೆಲ್ಸಿಯಸ್ ಇದ್ದರೆ, 40 ಡಿಗ್ರಿ ಸೆಲ್ಸಿಯಸ್ ಎಂಬಂತೆ ಭಾಸವಾಗುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು.
ಮುಂದಿನ 6-7 ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಇದೇ ವೇಳೆಯಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಯಷ್ಟು ಆಗಬೇಕು. ಈಗಾಗಲೇ ಹಲವು ಕಡೆಗಳಲ್ಲಿ ಮಳೆಯಾಗಿದೆ. ಮೇ ತಿಂಗಳಲ್ಲಿ ವಾಡಿಕೆ ಮಳೆಯಾದರೆ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ. ಕಳೆದ ವರ್ಷ ಮುಂಗಾರು ಪೂರ್ವ ಮಳೆ ಯಥೇಚ್ಛವಾಗಿ ಆದ ಕಾರಣ, ಜಲಾಶಯಗಳಲ್ಲಿ ನೀರಿನ ಸಂಗ್ರಹವಿದೆ. ಹೀಗಾಗಿ ಈ ಬೇಸಿಗೆಯಲ್ಲಿ ಕುಡಿಯುವ ಮತ್ತು ಕೃಷಿ ಉದ್ದೇಶಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ನಿಸರ್ಗ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸರೆಡ್ಡಿ.
ಮುಂಬರುವ ಜುಲೈನಲ್ಲಿ 'ಎಲ್ ನಿನೋ' ಕಾಲಿಡಲಿದೆ. ಈಗ 'ಲಾ ನಿನಾ' ಮುಗಿದು ತಟಸ್ಥ ಸ್ಥಿತಿ (ನ್ಯೂಟ್ರಲ್) ನಿರ್ಮಾಣವಾಗಿದೆ. 'ಎಲ್ ನಿನೋ' ಕಾಲಿಟ್ಟರೆ ಮಳೆಯ ಕೊರತೆ ಆಗಬಹುದು. ಈ ಅವಧಿಯಲ್ಲಿ ಮಳೆ ಬೀಳುವ ಸರಾಸರಿ ಪ್ರಮಾಣ ಶೇ 92 ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆಗಳು ತಿಳಿಸಿವೆ. ಇದರ ಅರ್ಥ ವಾಡಿಕೆಗಿಂತ ಕಡಿಮೆ ಮಳೆ ಆಗುತ್ತದೆ. ಸರಾಸರಿ ಪ್ರಮಾಣ ಶೇ 90ಕ್ಕಿಂತ ಕಡಿಮೆ ಇದ್ದರೆ ಮಳೆ ಕೊರತೆ ಆಗುತ್ತದೆ. ಶೇ 90ರಿಂದ ಶೇ 95ರಷ್ಟು ಇದ್ದರೆ ವಾಡಿಕೆಗಿಂತ ಕಡಿಮೆ, ಶೇ 96ರಿಂದ ಶೇ 104 ಇದ್ದರೆ ವಾಡಿಕೆಯಷ್ಟು, ಶೇ 104ರಿಂದ ಶೇ 110ರಷ್ಟು ಇದ್ದರೆ ವಾಡಿಕೆಗಿಂತ ಹೆಚ್ಚು. ಶೇ 110ಕ್ಕೂ ಹೆಚ್ಚು ಇದ್ದರೆ ಅಧಿಕ ಮಳೆ ಆಗುತ್ತದೆ.
'ಈ ವರ್ಷ ಶೇ 92ರಷ್ಟು ನಿರೀಕ್ಷೆ ಇರುವುದರಿಂದ ಇದರಲ್ಲಿ ಶೇ 5ರಷ್ಟು ಹೆಚ್ಚು ಅಥವಾ ಕಡಿಮೆಯಾದರೆ ಒಂದಷ್ಟು ಪರಿಣಾಮ ಬೀರುತ್ತದೆ. ಶೇ 5ರಷ್ಟು ಹೆಚ್ಚು ಆದರೆ ನೆಮ್ಮದಿಯ ಉಸಿರು ಬಿಡಬಹುದು. ಶೇ 5ರಷ್ಟು ಕಡಿಮೆ ಆದರೆ ಮಳೆಯ ಕೊರತೆ ಕಾಡುತ್ತದೆ. ಕುಡಿಯುವ ನೀರಿಗೆ ಮತ್ತು ಕೃಷಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗುವ ಹವಾಮಾನ ಮುನ್ಸೂಚನೆ ಇದೆ' ಎಂದು ಶ್ರೀನಿವಾಸರೆಡ್ಡಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
'ಕಳೆದ ವರ್ಷ ಮೇ ತಿಂಗಳಲ್ಲಿ ಅತ್ಯಧಿಕ ಮಳೆಯಾಗಿ ಕೆಆರ್ಎಸ್ ಸೇರಿ ಹಲವು ಅಣೆಕಟ್ಟುಗಳು ತುಂಬಿ ಹೋಗಿದ್ದವು. ಹೀಗಾಗಿ ಈ ವರ್ಷ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇದೆ. ಇನ್ನೂ ಒಂದೂವರೆ ತಿಂಗಳಿಗೆ ಈ ನೀರನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಕಳೆದ ವರ್ಷದ ಮಾದರಿಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಕಡಿಮೆ. ವಾಡಿಕೆಯಷ್ಟು ಆದರೂ ಪ್ರಾಥಮಿಕ ಕೃಷಿ ಚಟುವಟಿಕೆ ಆರಂಭಿಸಲು ಸಾಧ್ಯ. ವಾಡಿಕೆಯಷ್ಟು ನೀರಿನ ಒಳಹರಿವು ಬಂದರೆ, ಅಚ್ಚುಕಟ್ಟು ಪ್ರದೇಶದ ಸ್ಥಿತಿ ಕೊಂಚ ಉತ್ತಮವಾಗುತ್ತದೆ. ಎಲ್ ನಿನೋ ಪ್ರಭಾವವನ್ನೂ ತಗ್ಗಿಸಬಲ್ಲದು' ಎನ್ನುತ್ತಾರೆ ಅವರು.
ಆಶಾದಾಯಕ 2 ಮುನ್ಸೂಚನೆ
'ಎಲ್ ನಿನೋ'ದಿಂದ ಸಂಕಷ್ಟದ ಸಾಧ್ಯತೆ ಇದ್ದರೂ 'ಪಾಸಿಟಿವ್ ಇಂಡಿಯನ್ ಓಷನ್ ಡೈಪೊಲ್' (ಪಿಐಒಡಿ) ಮತ್ತು ಧ್ರುವ ಪ್ರದೇಶಗಳಲ್ಲಿ ಹಿಮ ಕರಗುವಿಕೆ ವರದಿಗಳ ಪ್ರಕಾರ ಭಾರತದಲ್ಲಿ ಉತ್ತಮ ಮಳೆ ಆಗಬಹುದು ಎಂಬ ಮಾಹಿತಿ ಇದೆ.
ಪಿಐಒಡಿ ವಿದ್ಯಮಾನದಿಂದ ಹಿಂದೂ ಮಹಾಸಾಗರದ ಮೇಲ್ಮೈಯಲ್ಲಿ ಬಿಸಿ ನೀರು ಪೂರ್ವದತ್ತ ಸಾಗುತ್ತದೆ. ಇದರಿಂದ ಎಲ್ ನಿನೋ ಪ್ರಭಾವ ಇದ್ದರೂ ಅದನ್ನು ಎದುರಿಸಿ ಉತ್ತಮ ಮಳೆಯಾಗುತ್ತದೆ. ಧ್ರುವ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಿಮ ಕರಗುವಿಕೆಯೂ ಭಾರತದಲ್ಲಿ ಉತ್ತಮ ಮಳೆ ತರುತ್ತದೆ.
'ಎಲ್ ನಿನೋ ಪ್ರಭಾವವನ್ನು ಈ ಎರಡೂ ವಿದ್ಯಮಾನಗಳು ಮೆಟ್ಟಿ ನಿಲ್ಲಬಲ್ಲವೇ ಎಂಬುದನ್ನು ಕಾದು ನೋಡಬೇಕು. ಒಂದು ವೇಳೆ ಮುಂಗಾರು ಮಳೆ ಕೈಕೊಟ್ಟರೆ ಮುಂದಿನ ಬೇಸಿಗೆ ಕಷ್ಟವಾಗಬಹುದು' ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಮೇವರೆಗಿನದು. ಮೇ ಕೊನೆಯಲ್ಲಿ ಸಮಗ್ರ ವರದಿಯನ್ನು ಇಲಾಖೆ ಬಿಡುಗಡೆ ಮಾಡಲಿದ್ದು, ಆಗ ಮುಂಗಾರಿನ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ವಿವರಿಸಿದರು.

