ಬೆನಕೆಪಳ್ಳಿ (ಚಿಂಚೋಳಿ): ತಾಲ್ಲೂಕಿನ ಬೆನಕೆಪಳ್ಳಿಯಲ್ಲಿ ಗುರುವಾರ ನಾಯಿಗಳ ದಾಳಿಯಿಂದ ಕಂಗಾಲಾಗಿದ್ದ ಕೃಷ್ಣಮೃಗವನ್ನು ರೈತ ಚಂದ್ರಶೇಖರ ಯಲಾಲ್ ರಕ್ಷಿಸಿದ್ದು, ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಚಂದ್ರಶೇಖಡರ ಅವರ ತೋಟದಲ್ಲಿನ ಮಾವಿನ ಹಣ್ಣು ತಿನ್ನಲು ಮಂಗಗಳು ನಿತ್ಯ ಬರುತ್ತವೆ. ಅವುಗಳಿಂದ ಮಾವು ರಕ್ಷಿಸಲು ಎಂದಿನಂತೆ ತೋಟಕ್ಕೆ ಹೋಗಿದ್ದರು. ಆಗ ಪೊದೆಯಲ್ಲಿ ನಾಯಿ ಬೊಗಳುತ್ತಿರುವ ಮತ್ತು ಕೃಷ್ಣಮೃಗ ಅರಚುತ್ತಿರುವ ಸದ್ದು ಕೇಳಿಸಿತು. ತಕ್ಷಣ ಕಲ್ಲಿನಿಂದ ಹೊಡೆದು ನಾಯಿಗಳನ್ನು ಓಡಿಸಿದ ಅವರು ಕೃಷ್ಣಮೃಗವನ್ನು ಹೊತ್ತುಕೊಂಡು ಸುರಕ್ಷಿತವಾಗಿ ತಂದಿದ್ದಾರೆ.
ನಾಯಿಗಳು ಕಚ್ಚಿದ್ದರಿಂದ ಕೃಷ್ಣಮೃಗ ಗಾಯಗೊಂಡಿದೆ. ಒಂದು ಕಾಲು ಮುರಿದಿದ್ದು, ನರಳಾಡುತ್ತಿತ್ತು. ಅದಕ್ಕೆ ನೀರು ಕುಡಿಸಿ ಆರೈಕೆ ಮಾಡಿದ ಚಂದ್ರಶೇಖರ ಅವರು ಶಿವಕುಮಾರ ಅವರೊಂದಿಗೆ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮಹಮದ್ ಮುನೀರ್ ಅಹಮದ್ ಅವರು, ಕೃಷ್ಣಮೃಗದ ಕಾಲು ಮುರಿದಿದ್ದು ಅದಕ್ಕೆ ಅಗತ್ಯವಾದ ಚಿಕಿತ್ಸೆ ನೀಡಿ ಉಪಚರಿಸಿ ನಂತರ ಕಾಡಿಗೆ ಬಿಡಲಾಗುವುದು. ರೈತರ ಕಾಳಜಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದರು.

