ಗುಂಡ್ಲುಪೇಟೆ: ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ ಎಂದು ಸಂಸದ ಸುನೀಲ್ ಬೋಸ್ ತಿಳಿಸಿದರು.
ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಅಕ್ಕ ಕೆಫೆ ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ದಿಸೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ನೈರ್ಮಲ್ಯ ಕಾಪಾಡಲು ಇನ್ನೂ ಪರಿಣಾಮಕಾರಿ ಕ್ರಮಗಳು ಆಗಬೇಕಿದೆ ಎಂದರು.
ಗ್ರಾಮೀಣ ಭಾಗದ ಜನರು ಸುಶಿಕ್ಷಿತರಾಗಿದ್ದು, ತಿಳಿವಳಿಕೆ ಮೂಡಿದ ಹಿನ್ನೆಲೆಯಲ್ಲಿ ಶೌಚಾಲಯಗಳ ಬಳಕೆ ಮಾಡುತ್ತಿರುವುದು ಉತ್ತಮ ವಿಚಾರ. ಇದರೊಂದಿಗೆ ಶೌಚಗುಂಡಿಗಳು ತುಂಬಿದಾಗ ಸಕ್ಕಿಂಗ್ ಯಂತ್ರದ ಸಹಾಯದಿಂದ ಹೊರ ತೆಗೆಯುವ ಮಲತ್ಯಾಜ್ಯವನ್ನು ಶುದ್ಧೀಕರಿಸಿ, ಆರು ತಿಂಗಳ ಕಾಲ ವೆಜ್ಞಾನಿಕವಾಗಿ ಸಂಸ್ಕರಿಸಿ, ಗೊಬ್ಬರವಾಗಿ ತಯಾರಿಸಲಾಗುತ್ತಿದೆ. ನಂತರ ಇಂತಿಷ್ಟು ಹಣ ನಿಗದಿ ಮಾಡಿ ವಾಣಿಜ್ಯ ಬೆಳೆಗಳಿಗೆ ಸೊಸೈಟಿಯಿಂದ ಮಾರಾಟ ಮಾಡುವ ವ್ಯವಸ್ಥೆ ಆಗಲಿದೆ ಎಂದು ತಿಳಿಸಿದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಗ್ಯಾರಂಟಿ ಯೋಜನೆ ಮಹಿಳೆಯರಿಗೆ ಬಲ ನೀಡಿದೆ ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ತಾಲ್ಲೂಕು ಪಂಚಾಯಿತಿ ಇಒ ಷಣ್ಮುಗಂ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಜಿ.ಪಂ ಮಾಜಿ ಉಪಾಧ್ಯಕ್ಷರಾದ ಕಬ್ಬಹಳ್ಳಿ ಮಹೇಶ್, ಪಿ.ಮಹದೇವಪ್ಪ, ಗ್ಯಾರಂಟಿ ಅನುಷ್ಟಾನ ಸಮಿತಿ ತಾಲ್ಲೂಕು ಅಧ್ಯಕ್ಷ ಎಚ್.ಜಿ.ಉಮಾಪತಿ, ಪಿಡಿಒ ಮಹದೇವಸ್ವಾಮಿ, ಕರಕಲಮಾದಹಳ್ಳಿ ಪ್ರಭು ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-37-1679895173

