Dailyhunt

ನಂಬಿಕೆ ಮೂಡಿಸುವ ಸಕಾರಾತ್ಮಕ ನಡೆ

ಭಾನುವಾರ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಡಲು ಸಿದ್ಧವಾಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಾಗ, ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಮಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲು ಮುಂದೆ ಬಂದ ಸಿಬ್ಬಂದಿಯ ಮನವಿಯನ್ನು ಒಪ್ಪದಿದ್ದುದು ಮಾದರಿ ನಡೆ.

ವಿಶೇಷ ವಿಮಾನದ ವ್ಯವಸ್ಥೆ ಮಾಡುವವರೆಗೂ ಕೆಳಗಿಳಿದು ಗಣ್ಯಾತಿಗಣ್ಯರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಬೇಕೆಂಬ ಕೋರಿಕೆಯನ್ನೂ ತಳ್ಳಿಹಾಕಿದ ಸಚಿವೆ, 'ಇಲ್ಲಿರುವ ಪ್ರತಿಯೊಬ್ಬರೂ ಸಮಾನರು. ಹಾಗೆಯೇ ನಾನು ಕೂಡ ಅವರಲ್ಲಿ ಒಬ್ಬಳು. ಎಲ್ಲರಿಗೂ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ, ಆಗಮಾತ್ರ ನಾನು ವಿಮಾನದಿಂದ ಇಳಿಯುವೆ' ಎಂದಿದ್ದಾಗಿ ವರದಿಗಳು ತಿಳಿಸಿವೆ.

ಕೇವಲ ಬಾಯಿಮಾತಿನಲ್ಲಿ ನಾವು ಜನಸೇವಕರು ಎಂದು ಹೇಳಿಕೊಂಡು, ತಮಗಿರುವ ಅಧಿಕಾರ, ಪ್ರಭಾವ, ಅಂತಸ್ತಿನ ಮೂಲಕ ದರ್ಪದ ಧೋರಣೆ ತೋರುತ್ತಾ, ಅತಿ ಹೆಚ್ಚಿನ ಪ್ರಾಮುಖ್ಯ ನಿರೀಕ್ಷಿಸುವ ರಾಜಕಾರಣಿಗಳು, ಅಧಿಕಾರಿಗಳ ನಡತೆಯನ್ನೇ ಜನ ಹೆಚ್ಚಾಗಿ ನೋಡುತ್ತಿರುತ್ತಾರೆ. ಅವರು ಇಂತಹ ಸರಳತೆ, ಸಮಾನತಾ ಭಾವನೆಯನ್ನು ರಾಜಕಾರಣಿಗಳಿಂದ ಖಂಡಿತ ನಿರೀಕ್ಷಿಸುತ್ತಾರೆ. ಇಂತಹ ಒಂದೊಂದು ಸಣ್ಣ ಸಣ್ಣ ಸಕಾರಾತ್ಮಕ ನಡೆಯೂ ವ್ಯಕ್ತಿಯ ಮೇಲಿನ ನಂಬಿಕೆ, ಗೌರವವನ್ನು ಹೆಚ್ಚಿಸುವುದು ಸತ್ಯ.

- ಅರ್ಚನಾ ಶಂಕರ್, ಬೆಂಗಳೂರು

Dailyhunt
Disclaimer: This content has not been generated, created or edited by Dailyhunt. Publisher: Prajavani