ಪಟ್ನಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಂದ ತೆರವಾಗಿರುವ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಸೋಮವಾರ(ಜುಲೈ 13) ನಾಮಪತ್ರ ಸಲ್ಲಿಸಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ಬೃಹತ್ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.
ಈ ವೇಳೆ ಅವರ ಪತ್ನಿ ಜಾಹ್ನವಿ ದಾಸ್ ಕೂಡ ಅವರೊಂದಿಗಿದ್ದರು.
ಐಪ್ಯಾಕ್ ಸಂಸ್ಥಾಪಕ ಮತ್ತು ರಾಜಕೀಯ ಸಲಹೆಗಾರರಾಗಿದ್ದ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ಅವರು, ಇದೇ ಮೊದಲ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಬಿಜೆಪಿ ಯುವ ಮೋರ್ಚಾ ಘಟಕದ ನಾಯಕ ನೀರಜ್ ಕುಮಾರ್ ಸಿನ್ಹಾ ಅವರು ಕೂಡ ಜುಲೈ 13ರಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಂಸದ ರವಿ ಶಂಕರ್ ಪ್ರಸಾದ್ ಮತ್ತು ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಸರೋಗಿ ಅವರು ಜೊತೆಗಿದ್ದರು.
ಬಿಜೆಪಿ ಪರ ನಾಮಪತ್ರ ಸಲ್ಲಿಸಿದ್ದ ಅಭಿಷೇಕ್ ಕುಮಾರ್ ಅವರು, ಕೌಟುಂಬಿಕ ಕಾರಣಗಳಿಂದ ನಾಮಪತ್ರ ವಾಪಾಸ್ ಪಡೆದಿದ್ದರು.

