Friday, 23 Apr, 4.55 pm ಪ್ರಜಾವಾಣಿ

ರಾಷ್ಟ್ರೀಯ
ಪ್ರಧಾನಿ ಜೊತೆಗಿನ ಸಭೆ ಟಿವಿಯಲ್ಲಿ ಪ್ರಸಾರ: ಕೇಜ್ರಿವಾಲ್ ವಿರುದ್ಧ ಬಿಜೆಪಿ ಕಿಡಿ

ನವದೆಹಲಿ: ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ಸಭೆಯಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಾತನಾಡಿದ ವಿಡಿಯೊ ಟೆಲಿವಿಜನ್‌ಗಳಲ್ಲಿ ಪ್ರಸಾರವಾಗಿದೆ. ವಿಡಿಯೊದಲ್ಲಿ, ಆಕ್ಸಿಜನ್ ಟ್ಯಾಂಕರ್‌ಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳು ತಡೆಯುತ್ತಿರುವ ಬಗ್ಗೆ ಕೇಜ್ರಿವಾಲ್ ಆರೋಪ ಮಾಡಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ನಾಂದಿ ಹಾಡಿದೆ.

ರಾಜಧಾನಿ ದೆಹಲಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿಗಳ ಸಂಕಷ್ಟದ ಬಗ್ಗೆ ಪ್ರಧಾನಿ ಗಮನ ಸೆಳೆದ ಕೇಜ್ರಿವಾಲ್, ದೆಹಲಿಯಲ್ಲಿ ಆಕ್ಸಿಜನ್ ಪ್ಲಾಂಟ್ ಇಲ್ಲವೆಂಬ ಕಾರಣಕ್ಕೆ ದೆಹಲಿಯ 2 ಕೋಟಿ ಜನ ಆಮ್ಲಜನಕ ಪಡೆಯಬಾರದೇ? ರಾಷ್ಟ್ರದ 130 ಕೋಟಿ ಜನರಿಗೆ ರಾಷ್ಟ್ರದ ಸಂಪನ್ಮೂಲಗಳ ಮೇಲೆ ಸಮಾನವಾದ ಹಕ್ಕು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೇಜ್ರಿವಾಲ್ ಅವರು 'ದೆಹಲಿ ಸಿಎಂ ಆಗಿರುವುದು ಅವಮಾನ' ಎಂದು ಬಿಜೆಪಿ ಟೀಿಕಿಸಿದೆ. "ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು" ಎಂದು ಹೇಳಿದೆ.

ಬಾಗಿಲು ಮುಚ್ಚಿದ ಕೊಠಡಿಯಲ್ಲಿ ಸಿಎಂ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಬೇಕಿತ್ತು. ಆದರೆ, ಅವರ ಮಾತುಕತೆ ಮುಗಿದ ಕೂಡಲೇ ಟಿವಿಗಳಲ್ಲಿ ವಿಡಿಯೊ ಪ್ರಸಾರವಾಯಿತು. ಕೈಮುಗಿದು ಪ್ರಧಾನಿ ಮೋದಿಗೆ ಮನವಿ ಮಾಡಿದ ಅರವಿಂದ್ ಕೇಜ್ರಿವಾಲ್, ಆಕ್ಸಿಜನ್ ಸಿಗದೆ ದೆಹಲಿಯ ಜನ ತೀವ್ರ ನೋವಿನಲ್ಲಿದ್ದಾರೆ. ಆಕ್ಸಿಜನ್ ಟ್ಯಾಂಕರ್‌ಗಳ ಸರಾಗ ಸಂಚಾರಕ್ಕೆ ಅನುವುಮಾಡಿಕೊಡಲು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು ದೆಹಲಿಗೆ ಆಮ್ಲಜನಕ ಪೂರೈಕೆಯನ್ನು ನಿರ್ಬಂಧಿಸುತ್ತಿವೆ ಎಂದು ಈ ಹಿಂದೆ ಆರೋಪಿಸಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ದೆಹಲಿಗೆ ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ಅರೆಸೈನಿಕ ಪಡೆಗಳನ್ನು ನಿಯೋಜಿಸಬೇಕು ಎಂದು ಹೇಳಿದ್ದರು.

ದೇಶದ ಎಲ್ಲಾ ಆಮ್ಲಜನಕ ಘಟಕಗಳನ್ನು ಕೇಂದ್ರ ಸರ್ಕಾರವು ಸೇನೆ ಬಳಸಿ ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಪ್ರತಿ ಟ್ರಕ್‌ನಲ್ಲೂ ಸೇನೆಯ ಬೆಂಗಾವಲು ವಾಹನಗಳಿರಬೇಕು ಎಂದು ಸಭೆಯಲ್ಲಿ ಕೇಜ್ರಿವಾಲ್ ಒತ್ತಾಯಿಸಿದರು.

'ರೋಗಿಗಳಿಗೆ ಆಮ್ಲಜನಕದ ಕೊರತೆಯಿಂದಾಗಿ ಮುಂದೆ ದೊಡ್ಡ ದುರಂತಗಳು ಸಂಭವಿಸಬಹುದು ಎಂದು ನಾವು ಭಯಪಡುತ್ತಿದ್ದೇವೆ. ದೆಹಲಿಯ ಮುಖ್ಯಮಂತ್ರಿಯಾಗಿದ್ದರೂ, ಅಂತಹ ಸನ್ನಿವೇಶದಲ್ಲಿ ನಾನು ಅಸಹಾಯಕನಾಗಿದ್ದೇನೆ. ಯಾವುದೇ ದೊಡ್ಡ ಅಪಘಾತ ಸಂಭವಿಸಿದಲ್ಲಿ ನನಗೆ ಕ್ಷಮೆಯೇ ಇರುವುದಿಲ್ಲ' ಎಂದ ಕೇಜ್ರಿವಾಲ್, ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರೀಯ ಯೋಜನೆಗಾಗಿ ಒತ್ತಾಯಿಸಿದರು.

ಕೇಜ್ರಿವಾಲ್ ಟೀಕೆ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, 'ರಾಜಕಾರಣಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಹುದೇ?' ಎಂದು ಪ್ರಶ್ನಿಸಿದ್ದಾರೆ.

ಮುಚ್ಚಿದ ಕೊಠಡಿಯಲ್ಲಿ ನಡೆಯಬೇಕಿದ್ದ ಸಭೆಯನ್ನು ಟಿವಿಗಳಿಗೆ ಬಹಿರಂಗಪಡಿಸಿದ ಬಗ್ಗೆ ಸಂಬಿತ್ ಪಾತ್ರ ಪ್ರಶ್ನೆ ಎತ್ತಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top