ನವದೆಹಲಿ: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 359 ಮಂದಿ ಮೃತಪಟ್ಟಿದ್ದಾರೆ. 1,400 ಕಿ.ಮೀ ಉದ್ದದ ಪರ್ವತಶ್ರೇಣಿಯನ್ನೊಳಗೊಂಡ ಗಡಿಯ ಪೈಕಿ ಸುಮಾರು 100 ಕಿ.ಮೀ ಪ್ರದೇಶವು ಈ ಋತುವಿನಲ್ಲಿ ಸಾವಿರಾರು ಚಾರಣಿಗರು, ವ್ಯಾಪಾರಿಗಳು ಮತ್ತು ಹಿಂದೂ ಯಾತ್ರಾರ್ಥಿಗಳಿಂದ ಗಿಜಿಗುಡುತ್ತಿರುತ್ತದೆ.
ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಈ ಪ್ರದೇಶವು ತೀವ್ರ ಹಾನಿಗೆ ಒಳಗಾಗಿದೆ. ನೀರ್ಗಲ್ಲು ಕುಸಿದಿದ್ದೇ ಈ ಪ್ರವಾಹಕ್ಕೆ ಕಾರಣ ಎದು ಕೆಲ ವರದಿಗಳು ಸೂಚಿಸಿವೆ.
ಪ್ರವಾಹದಲ್ಲಿ 40 ಕಿ.ಮೀ ಉದ್ದದ ಗಡಿ ರಸ್ತೆ, ಗಡಿ ಹೊರಠಾಣೆ, ಈ ಪ್ರದೇಶದ ಹಲವು ವಸತಿ ಪ್ರದೇಶಗಳು ಕೊಚ್ಚಿ ಹೋಗಿವೆ. ಇದರ ಪ್ರಭಾವವು ನದಿಯ ಹರಿವಿನ ದಿಕ್ಕಿನಲ್ಲಿ 100 ಕಿ.ಮೀ ವರೆಗೂ ವ್ಯಾಪಿಸಿತ್ತು.
ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಚಾರಣ ಮತ್ತು ಯಾತ್ರಾ ಸ್ಥಳಗಳು ಸೇರಿವೆ. ಈ ಋತುವಿನಲ್ಲಿ ಈ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಹೀಗಾಗಿ, ಈ ಸ್ಥಳಗಳು ಸ್ಥಳೀಯರಿಗೆ ಜೀವನೋಪಾಯದ ಪ್ರಮುಖ ಮೂಲಗಳಾಗಿವೆ.
ಯಾತ್ರಾರ್ಥಿಗಳು, ಚಾರಣಿಗರ ದಂಡು
ಕೈಲಾಸ ಮಾನಸ ಸರೋವರ ಯಾತ್ರೆಗೆ ಮಾತರವಲ್ಲದೇ, ರಕ್ಷಾ ಬಂಧನ ಮತ್ತು ಶ್ರಾವಣ ಪೂರ್ಣಿಮೆ ಸಮಯದಲ್ಲಿ ಇಲ್ಲಿನ ಗೋಸೈನ್ ಕುಂಡ ಮತ್ತು ದಾಮೋದರ ಕುಂಡದಂತಹ ಸ್ಥಳೀಯ ಸರೋವರಗಳಲ್ಲಿ ಪವಿತ್ರ ಸ್ನಾನ ಮಾಡುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ಹರಿದುಬರುತ್ತದೆ.
ಇದರ ಜೊತೆಗೆ, ಈ ಪ್ರದೇಶದಲ್ಲಿ ಮಾರ್ಚ್ನಿಂದ ಮೇವರೆಗೆ ಮತ್ತು ಸೆಪ್ಟೆಂಬರ್ನಿಂದ ನವೆಂಬರ್ವರೆಗೆ ಚಾರಣಕ್ಕೆ ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಹಲವು ಉತ್ಸಾಹಿಗಳು ಸೆಪ್ಟೆಂಬರ್ ತಿಂಗಳ ಜನಸಂದಣಿಯಿಂದ ತಪ್ಪಿಸಿಕೊಳ್ಳಲು ಆಗಸ್ಟ್ ತಿಂಗಳಲ್ಲೇ ಇಲ್ಲಿಗೆ ಆಗಮಿಸುತ್ತಾರೆ.
ಚಾರಣ ತಾಣಗಳು
ಈ ಪ್ರದೇಶದಲ್ಲಿ ಲ್ಯಾಂಗ್ಟಾಂಗ್ ಕಣಿವೆಯಿಂದ ಮುಸ್ತಾಂಗ್ವರೆಗೆ, ಸಯಾಬ್ರುಬೇಸಿಯಿಂದ ತಿಮುರೆವರೆಗೆ ಮತ್ತು ತ್ಸುಮ್ ಕಣಿವೆಯಿಂದ ನುವಕೋಟ್ನಲ್ಲಿರುವ ಫಿಕುರಿಯವರೆಗೆ ಹಲವು ಚಾರಣ ತಾಣಗಳಿವೆ.
ಕೈಲಾಸ ಪರ್ವತ ಮತ್ತು ಮಾನಸ ಸರೋವರದ ಜೊತೆಗೆ ಗೋಸೈನ್ಕುಂಡ, ದಾಮೋದರ್ ಕುಂಡ, ಮುಕ್ತಿನಾಥ ದೇವಾಲಯ ಹಾಗೂ ಶೇ ಗೊಂಪಾ ಯಾತ್ರಾರ್ಥಿಗಳು ಭೇಟಿ ನೀಡುವ ಪ್ರಮುಖ ಸ್ಥಳಗಳಾಗಿವೆ. .

