Dailyhunt Logo
  • Light mode
    Follow system
    Dark mode
    • Play Story
    • App Story
ಪ್ರೇಯಸಿಯ ಕೊಂದು, ಶವವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿಟ್ಟ ನೌಕಾಪಡೆ ಅಧಿಕಾರಿ

ಪ್ರೇಯಸಿಯ ಕೊಂದು, ಶವವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿಟ್ಟ ನೌಕಾಪಡೆ ಅಧಿಕಾರಿ

ವಿಶಾಖಪಟ್ಟಣ (ಆಂಧ್ರಪ್ರದೇಶ): ವಿಶಾಖಪಟ್ಟಣದ ಗಜುವಾಕ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತನ್ನ ಪ್ರೇಯಸಿಯನ್ನು(29) ಕೊಲೆ ಮಾಡಿ, ಆಕೆಯ ದೇಹವನ್ನು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಅಲ್ಲದೇ ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದು ಸಾಕ್ಷ್ಯಗಳನ್ನು ನಾಶಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ.

ಆರೋಪಿಯನ್ನು ಭಾರತೀಯ ಐಎನ್‌ಎಸ್ ದೇಗಾದಲ್ಲಿ ನಿಯೋಜಿತನಾಗಿದ್ದ ರವೀಂದ್ರ(35) ಎಂದು ಗುರುತಿಸಲಾಗಿದೆ. ಮೌನಿಕಾ ಹತ್ಯೆಗೀಡಾದ ಮಹಿಳೆ.

ಆರೋಪಿ 2021ರಲ್ಲಿ ಡೇಟಿಂಗ್ ಆಯಪ್ ಮೂಲಕ ಮೌನಿಕಾಳ ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು. ಅವರು ವಿಶಾಖಪಟ್ಟಣದ ಪಾರ್ಕ್ ಹಾಗೂ ಚಿತ್ರಮಂದಿರಗಳಲ್ಲಿ ಆಗಾಗ ಭೇಟಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ವಾರಗಳ ಹಿಂದೆ ಆರೋಪಿಯ ಪತ್ನಿ ವಿಜಯನಗರದಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ್ದರು. ಪ್ರೇಯಸಿಯೊಂದಿಗೆ ಸಮಯ ಕಳೆಯಲು ಇದು ಸೂಕ್ತ ಸಮಯ ಎಂದು ಭಾವಿಸಿದ ಆತ ಭಾನುವಾರ ಮಧ್ಯಾಹ್ನ ಮೌನಿಕಾಳನ್ನು ಮನೆಗೆ ಕರೆಸಿಕೊಂಡಿದ್ದ.

ಸಂಜೆಯ ವೇಳೆಗೆ ಇಬ್ಬರ ನಡುವೆ ಜಗಳವಾಗಿದ್ದು, ರವೀಂದ್ರ ಮೌನಿಕಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಶವವನ್ನು ಹಲವು ತುಂಡುಗಳಾಗಿ ಕತ್ತರಿಸಿ, ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ. ಉಳಿದ ಭಾಗಗಳನ್ನು ತನ್ನ ಮನೆಯ ಫ್ರಿಡ್ಜ್‌ನಲ್ಲಿಟ್ಟಿದ್ದ.

ಬಳಿಕ ಆರೋಪಿಯೇ ಪೊಲೀಸ್ ಠಾಣೆಗೆ ತೆರಳಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮೌನಿಕಾ ತನ್ನಿಂದ ₹3.5ಲಕ್ಷ ಪಡೆದಿದ್ದಳು. ಅಲ್ಲದೇ ನಮ್ಮ ಸಂಬಂಧದ ಬಗ್ಗೆ ಪತ್ನಿಗೆ ತಿಳಿಸುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಆರೋಪಿ ತಿಳಿಸಿದ್ದಾಗಿ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯ ಮನೆಯ ಫ್ರಿಡ್ಜ್‌ನಲ್ಲಿ ಶವದ ತುಂಡುಗಳು ಪತ್ತೆಯಾಗಿವೆ. ಮೌನಿಕಾಳ ತಲೆ ನಾಪತ್ತೆಯಾಗಿದ್ದು, ರವೀಂದ್ರ ಅದನ್ನು ಬೇರೆಡೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನಾಪತ್ತೆಯಾದ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಈ ಪ್ರಕರಣವು 2022 ಮೇ 18ರಂದು ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಹತ್ಯೆಯನ್ನು ನೆನಪಿಸುವಂತಿದೆ. ಆರೋಪಿ ಆಫ್ತಾಬ್‌ ತನ್ನ ಸಹಜೀವನ ಸಂಗಾತಿಯಾಗಿದ್ದ ಶ್ರದ್ಧಾ ಅವರನ್ನು ಹತ್ಯೆಗೈದು, ಆಕೆಯ ದೇಹವನ್ನು ತುಂಡರಿಸಿ ದೆಹಲಿಯ ಹೊರವಲಯದಲ್ಲಿ ಎಸೆದಿದ್ದ.

ಶ್ರದ್ಧಾ ವಾಲ್ಕರ್ ಹತ್ಯೆ: ಆರೋಪಿ ವಿರುದ್ಧ ಆರೋಪಗಳನ್ನು ಪಟ್ಟಿ ಮಾಡಿದ ಕೋರ್ಟ್
Dailyhunt
Disclaimer: This content has not been generated, created or edited by Dailyhunt. Publisher: Prajavani