ಬೈಂದೂರು: ಗ್ರಾಮದೇವತೆ ಸೇನೇಶ್ವರ ದೇವರ ವಾರ್ಷಿಕ ಮನ್ಮಹಾರಥೋತ್ಸವ ಬುಧವಾರ ಜರುಗಿತು. ಕ್ಷೇತ್ರದ ತಂತ್ರಿ ಕೃಷ್ಣ ಸೋಮಯಾಜಿ ಪ್ರಧಾನ ಆಚಾರ್ಯತ್ವದಲ್ಲಿ ದೇವರಿಗೆ ನಿತ್ಯ ಬಲಿ, ಶತರುದ್ರಾಭಿಷೇಕ, ರಥ ಬಲಿ, ಕ್ಷೇತ್ರಪಾಲ ಬಲಿ, ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆದವು.
ಮಧ್ಯಾಹ್ನ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತರು ಸಂಭ್ರಮಿಸಿದರು. ಸಂಪ್ರದಾಯದಂತೆ ರಥೋತ್ಸವದ ಪೂರ್ವದಲ್ಲಿ ಮುಖ್ಯರಸ್ತೆಯಲ್ಲಿರುವ ಜಾಮಿಯಾ ಮಸೀದಿಗೆ ತೆರಳಿ ಮುಸ್ಲಿಂ ಸಮುದಾಯದವರನ್ನು ಆಹ್ವಾನಿಸಿ, ಠಾಣಾಧಿಕಾರಿಯನ್ನು ಕರೆತಂದು ಉತ್ಸವಕ್ಕೆ ಚಾಲನೆ ನೀಡುವ ಪದ್ಧತಿ ಮುಂದುವರಿಯಿತು.
ಶಾಸಕ ಗುರುರಾಜ ಗಂಟಿಹೊಳೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ ಬೈಂದೂರು ಪಾಲ್ಗೊಂಡಿದ್ದರು. ಗುರುವಾರ ರಾತ್ರಿ ದೇವರ ಅವಭೃತ ಸ್ನಾನ, ಶುಕ್ರವಾರ ಧ್ವಜಾವರೋಹಣ, ನಗರೋತ್ಸವ ನಡೆಯಲಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-28-158318243

