ಕಾರವಾರ: ಸಮುದ್ರ ಮಾರ್ಗದ ರಕ್ಷಣೆಗಾಗಿ ಎರಡು ದಶಕಗಳು ಕಾರ್ಯನಿರ್ವಹಿಸಿದ 'ಸಾವಿತ್ರಿಬಾಯಿ ಫುಲೆ' ಭಾರತೀಯ ಕೋಸ್ಟ್ ಗಾರ್ಡ್ ನೌಕೆಯು ಶನಿವಾರ (ಸೆಪ್ಟೆಂಬರ್ 19) ನಿವೃತ್ತಿಯಾಯಿತು. ಇಲ್ಲಿನ ವಾಣಿಜ್ಯ ಬಂದರಿನಲ್ಲಿ ಕೋಸ್ಟ್ ಗಾರ್ಡ್ನ ಧಕ್ಕೆಯಲ್ಲಿ ನೌಕೆಯ ಮೇಲಿನಿಂದ ಧ್ವಜ ಇಳಿಸುವ ಮೂಲಕ ನೌಕೆಯ ಸೇವೆಗೆ ವಿದಾಯ ಘೋಷಿಸಲಾಗುವುದು.
ಸರೋಜಿನಿ ನಾಯ್ಡು ವರ್ಗಕ್ಕೆ ಸೇರಿದ, ವೇಗವಾಗಿ ಚಲಿಸುವ ಗಸ್ತು ನೌಕೆ ಇದಾಗಿತ್ತು. 50.44 ಮೀಟರ್ ಉದ್ದ ಮತ್ತು 7.51 ಮೀಟರ್ ಅಗಲದ ನೌಕೆಯು 270 ಟನ್ ಭಾರವಿದೆ. 2,720 ಕೆ.ವಿ ಸಾಮರ್ಥ್ಯದ ಡೀಸೆಲ್ ಎಂಜಿನ್ವುಳ್ಳ ನೌಕೆಯು ಪ್ರತಿ ಗಂಟೆಗೆ 35 ನಾಟಿಕಲ್ ಮೈಲು ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿತ್ತು.
ಸೂರ್ಯಾಸ್ತವಾಗುತ್ತಿದ್ದ ಕ್ಷಣದಲ್ಲಿ ನೌಕೆಯ ಮೇಲಿನ ಧ್ವಜವನ್ನು ಇಳಿಸಿಕೊಂಡ ನೌಕೆಯ ಕಮಾಂಡಿಂಗ್ ಅಧಿಕಾರಿ ಗೌರವ್ ಶ್ರೀವಾತ್ಸವ ಅವರು ಧ್ವಜವನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ಕೋಸ್ಟ್ ಗಾರ್ಡ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಪ್ರವೀಣ ಕುಮಾರ ಮಿಶ್ರಾ ಅವರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ವಿದಾಯ ಘೋಷಣೆ ಮಾಡಿದರು.
ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಪ್ರವೀಣ ಕುಮಾರ ಮಿಶ್ರಾ ಮಾತನಾಡಿ, 'ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಯಾಚರಣೆಗೆ ಸಾವಿತ್ರಿಬಾಯಿ ಫುಲೆ ನೌಕೆ ನೆರವು ನೀಡಿದೆ. ಕೋಸ್ಟ್ ಗಾರ್ಡ್ ಧೈರ್ಯ, ಸಾಹಸಕ್ಕೆ ಇದು ಬಲ ತುಂಬಿತ್ತು. ಅಪಾಯದಲ್ಲಿದ್ದವರನ್ನು ರಕ್ಷಣೆ ಮಾಡುವುದರ ಜೊತೆಗೆ ನಿರಂತರ ಸಮುದ್ರ ಗಸ್ತಿನ ಮೂಲಕ ರಕ್ಷಣೆಗೆ ಭರವಸೆಯ ಕಿರಣವಾಗಿತ್ತು' ಎಂದರು.
ಸಾವಿತ್ರಿಬಾಯಿ ಫುಲೆ ನೌಕೆಯ ಕಮಾಂಡೆಂಟ್ ಗೌರವ್ ಶ್ರೀವಾತ್ಸವ್ ಮಾತನಾಡಿ, 'ನೌಕೆಯು 4 ಸಾವಿರ ನಾಟಿಕಲ್ ಮೈಲಿಯಷ್ಟು ದೂರ ಕ್ರಮಿಸಿದೆ. 71 ಜನರ ರಕ್ಷಣೆ ಕಾರ್ಯಾಚರಣೆಗೆ ಬಳಕೆ ಆಗಿದೆ. ಸಮುದ್ರ ಮಾರ್ಗದಲ್ಲಿನ ಮಾದಕ ವಸ್ತು ಸಾಗಣೆ ಪತ್ತೆ ಕಾರ್ಯಾಚರಣೆಗೆ ನೆರವಾಗಿದೆ' ಎಂದರು. ಕೋಸ್ಟ್ ಗಾರ್ಡ್ ಹಿರಿಯ ಅಧಿಕಾರಿ ಅಖಿಲ್ ಯಾದವ, ಕೋಸ್ಟ್ ಗಾರ್ಡ್ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
'ಐಸಿಜಿಎಸ್ ಪರಾಗ್' ಕಾರವಾರಕ್ಕೆ
'ಸಾವಿತ್ರಿಬಾಯಿ ಫುಲೆ ವಿದಾಯ ಆಗಿದ್ದರಿಂದ ಅದಕ್ಕೆ ಪರ್ಯಾಯವಾಗಿ 'ಐಸಿಜಿಎಸ್ ಪರಾಗ್' ಗಸ್ತು ನೌಕೆಯು ಜನವರಿ ವೇಳೆಗೆ ಕಾರವಾರಕ್ಕೆ ಬರಲಿದೆ. ಇನ್ನೂ ಮೂರು ಗಸ್ತು ನೌಕೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ' ಎಂದು ಕೋಸ್ಟ್ ಗಾರ್ಡ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಪ್ರವೀಣ ಕುಮಾರ ಮಿಶ್ರಾ ಹೇಳಿದರು. 'ಅಮದಳ್ಳಿಯಲ್ಲಿ ಕೋಸ್ಟ್ ಗಾರ್ಡ್ ಕಚೇರಿ ಕಾರ್ಯಾರಂಭಿಸುತ್ತಿದೆ. ವಾಣಿಜ್ಯ ಬಂದರಿನ 150 ಮೀಟರ್ ಜಟ್ಟಿಯನ್ನೇ ಸರ್ಕಾರ ಕೋಸ್ಟ್ ಗಾರ್ಡ್ಗೆ ನೀಡಿದೆ. ಸದ್ಯಕ್ಕೆ ಹೊಸ ಜಟ್ಟಿ ನಿರ್ಮಾಣದ ಪ್ರಸ್ತಾವ ಇಲ್ಲ' ಎಂದು ಪ್ರತಿಕ್ರಿಯಿಸಿದರು.
260919-51-832349606

