ಬೆಳಗಾವಿ: 'ಸಚಿವ ಸ್ಥಾನ ಸೇರಿದಂತೆ ಯಾವುದೇ ಆಸೆ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿಲ್ಲ. ಆಸೆ ಇದ್ದಿದ್ದರೆ ಹಿಂದೆಯೇ ಕೇಳುತ್ತಿದ್ದೆ' ಎಂದು ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, 'ಸ್ಥಾನ ಬೇಕು ಎಂದು ಈವರೆಗೂ ಕೇಳಿಲ್ಲ.
ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಮುಂದೆಯೂ ಹಾಗೆಯೇ ಇರುತ್ತೇನೆ. ನನ್ನ ಸೇವೆಯನ್ನು ಗುರುತಿಸಿಯೇ ಮಹಾನಗರಪಾಲಿಕೆ ಚುನಾವಣೆಯನ್ನು ಉಸ್ತುವಾರಿಯನ್ನು ಪಕ್ಷದವರು ಕೊಟ್ಟಿದ್ದರು. ಅದನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಹಾಗೆಂದು ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದಿಲ್ಲ' ಎಂದರು.
'31 ವರ್ಷಗಳಿಂದಲೂ ಪಕ್ಷದ ಚೌಕಟ್ಟಿನಲ್ಲೆ ರಾಜಕಾರಣ ಮಾಡಿದ್ದೇನೆ. 1990ರಿಂದಲೂ ಪಕ್ಷದ ಧ್ವಜ ಕಟ್ಟುತ್ತಾ ಬಂದಿದ್ದೇನೆ. ಅದರಲ್ಲಿ ವಿಶೇಷವೇನೂ ಇಲ್ಲ. ಪಕ್ಷದ ಕೆಲಸಗಳಿಗೆ ಸದಾ ಮುಂದಿರುತ್ತೇನೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ನಮ್ಮ ಮನೆಗೆ ಬಂದಿದ್ದರು. ಈಗಿನ ಮುಖ್ಯಮಂತ್ರಿಯೂ ಭಾನುವಾರ ಬರುತ್ತಿದ್ದಾರೆ. ಬೆಳಗಾವಿಗೆ ಬರುವ ನಾಯಕರೆಲ್ಲರೂ ನನ್ನ ಮನೆಗೆ ಮಾತ್ರವಲ್ಲ ಕಾರ್ಯಕರ್ತರ ಮನೆಗಳಿಗೂ ಭೇಟಿ ಕೊಡುತ್ತಾರೆ. ಇದರಲ್ಲಿ ಬೇರೆ ಉದ್ದೇಶವೇನೂ ಇರುವುದಿಲ್ಲ' ಎಂದು ಪ್ರತಿಕ್ರಿಯಿಸಿದರು.

