ಬೆಲ್ಡಾ/ಕೋಲ್ಕತ್ತ/ನವದೆಹಲಿ: 'ಆರೋಪ ಪಟ್ಟಿ' ಇರುವ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಿಡುಗಡೆ ಮಾಡಿದ್ದರ ಕುರಿತು ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಸಮುದಾಯಗಳ ಮಧ್ಯೆ ಜಗಳವಾಡಿಸಿ, ಅದರಲ್ಲಿ ಬೇಳೆ ಬೇಯಿಸಿಕೊಂಡು ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಮೊದಲು ಆರೋಪ ಪಟ್ಟಿ ದಾಖಲಿಸಬೇಕು' ಎಂದರು.
ಪಶ್ಚಿಮ ಮೇಧಿನಿಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಸೋಮವಾರ ಮಾತನಾಡಿ, 'ಬಿಜೆಪಿಯು ಸಮಾಜದಲ್ಲಿ ಜಗಳ ಸೃಷ್ಟಿಸುತ್ತದೆ. ಸಮಾಜದಲ್ಲಿನ ಅಶಾಂತಿಯ ಪರಿಸ್ಥಿತಿಯನ್ನು ಬಳಸಿಕೊಂಡು, ಅದರ ಅನುಕೂಲತೆಯನ್ನು ಪಡೆದುಕೊಂಡು ದೇಶವನ್ನು ಕೊಳ್ಳೆ ಹೊಡೆಯಬೇಕು ಎಂಬುದು ಅದರ ಬಯಕೆ' ಎಂದು ಆರೋಪಿಸಿದರು.
'ಹಿಂದೂ-ಮುಸ್ಲಿಂಮರಿಂದ ಹಿಡಿದು ಆಡಳಿತ ವರ್ಗ ಮತ್ತು ಪೊಲೀಸರವರೆಗೂ ಜನರನ್ನು ಬಿಜೆಪಿ ವಿಭಜಿಸುತ್ತದೆ. ಉತ್ತಮ ಕೆಲಸ ಮಾಡುವ ಅಧಿಕಾರಿಗಳನ್ನೂ ಅವಮಾನಿಸಲಾಗುತ್ತದೆ. ಇಲ್ಲಿನ ಹಲವು ಹಿರಿಯ ಅಧಿಕಾರಿಗಳನ್ನು ಹೇಳದೇ ಕೇಳದೇ ಅವರ ಹುದ್ದೆಯಿಂದ ವಜಾ ಮಾಡಿ, ಚುನಾವಣೆ ನಡೆಯುವ ಇತರೆ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಬಿಜೆಪಿ ನಿರ್ದೇಶನದಂತೆಯೇ ಇದು ನಡೆಯುತ್ತದೆ' ಎಂದರು.

