ನವದೆಹಲಿ: 'ಸುದೀರ್ಘ ಹೋರಾಟದಿಂದ ನೀವು ದಣಿದಿರಬಹುದು. ಇನ್ನು ಮುಂದೆ ಶಾಂತಿ ಮರುಸ್ಥಾಪನೆಯ ಬಗ್ಗೆ ಯೋಚಿಸಿ, ರಾಜ್ಯದ ಎಲ್ಲ ಹೆದ್ದಾರಿಗಳಲ್ಲಿ ದಿಗ್ಬಂಧನ ತೆರವುಗೊಳಿಸಲು ಕ್ರಮ ವಹಿಸಿ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯದ ಪ್ರತಿನಿಧಿಗಳಿಗೆ ಸೂಚಿಸಿದೆ.
ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷ ಮೂರು ವರ್ಷಗಳಿಂದ ಮುಂದುವರಿದಿದೆ. 260ಕ್ಕೂ ಹೆಚ್ಚು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಹೆದ್ದಾರಿಗಳು ರಾಜ್ಯವೊಂದರ ಜೀವನಾಡಿ ಇದ್ದಂತೆ. ರಸ್ತೆ ಸಂಚಾರ ನಿರ್ಬಂಧಿಸುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನು ಒಳಗೊಂಡ ಪೀಠವು ಅಭಿಪ್ರಾಯಪಟ್ಟಿತು.
'ಹೆದ್ದಾರಿ ಮೇಲಿನ ದಿಗ್ಬಂಧನ ತೆರವುಗೊಳಿಸಲು ಕೋರ್ಟ್ ಹಸ್ತಕ್ಷೇಪ ಮಾಡುವುದು ಜೀವಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಈ ಎರಡೂ ಸಮುದಾಯಗಳ ಪ್ರತಿನಿಧಿಗಳು ಶಾಂತಿ ಮರುಸ್ಥಾಪನೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಆದಷ್ಟು ಬೇಗ ಸಂಚಾರ ನಿರ್ಬಂಧ ತೆರವುಗೊಳಿಸಬೇಕು' ಎಂದು ಸೂಚಿಸಿದ ನ್ಯಾಯಪೀಠವು, ಈ ಪ್ರಕರಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರವನ್ನು ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಿಕೊಂಡಿತು.
'ಅರ್ಜಿದಾರರ ಪರ ವಕೀಲರು, 'ಮಣಿಪುರದಲ್ಲಿ ಪರಿಸ್ಥತಿ ಭೀಕರವಾಗಿದೆ. ಹೆದ್ದಾರಿಗಳ ಮೇಲೆ ಹೇರಿರುವ ದಿಗ್ಬಂಧನದಿಂದ ಆಹಾರ ಸರಬರಾಜು, ಮಕ್ಕಳ ಶಿಕ್ಷಣ ಸೇರಿ, ಅಗತ್ಯ ವಸ್ತುಗಳ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವಾದಿಸಿದರು.

