Dailyhunt Logo
  • Light mode
    Follow system
    Dark mode
    • Play Story
    • App Story
ಶರಾವತಿ ಪಂಪ್ಡ್‌ ಸ್ಟೋರೇಜ್‌ ಅನುಮತಿಗೆ ರಹದಾರಿ: ನಿಯಾಸ್‌ ಶಿಫಾರಸು

ಶರಾವತಿ ಪಂಪ್ಡ್‌ ಸ್ಟೋರೇಜ್‌ ಅನುಮತಿಗೆ ರಹದಾರಿ: ನಿಯಾಸ್‌ ಶಿಫಾರಸು

ವದೆಹಲಿ: ಸಂರಕ್ಷಿತ ಪ್ರದೇಶದಲ್ಲಿ ಹೊಸ ಅಣೆಕಟ್ಟೆಗಳ ನಿರ್ಮಾಣವನ್ನು ಒಳಗೊಳ್ಳದ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಅನುಮೋದನೆ ನೀಡಬಹುದು ಎಂದು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ (ನಿಯಾಸ್‌) ಶಿಫಾರಸು ಮಾಡಿದೆ.

ಈ ಯೋಜನೆಯು ತಾಪಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹಾಗೂ ಇಂಧನ ಸುರಕ್ಷತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಯೋಜನೆಯ ಜಾರಿಯಲ್ಲಿ ರಾಷ್ಟ್ರೀಯ ಹಾಗೂ ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಅಂಶಗಳನ್ನು ಒಳಗೊಂಡ ವರದಿಯನ್ನು ಅದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಅವರಿಗೆ ಜೂನ್‌ 24ರಂದು ಸಲ್ಲಿಸಿದೆ. ಪಂಪ್ಡ್ ಸ್ಟೋರೇಜ್‌ ಯೋಜನೆಯ ಅನುಷ್ಠಾನ ಕಾರ್ಯಸಾಧುವಲ್ಲ ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತಜ್ಞರ ಸಮಿತಿ ಈ ಹಿಂದೆ ಅಭಿಪ್ರಾಯಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಮಂಡಳಿಯ ಸ್ಥಾಯಿ ಸಮಿತಿಯ 84ನೇ ಸಭೆಯಲ್ಲಿ (2025ರ ಜೂನ್‌ 26) ಯೋಜನೆಗೆ ಷರತ್ತುಬದ್ಧ ಅನುಮೋದನೆ ನೀಡಲಾಗಿತ್ತು. ಆಗಸ್ಟ್‌ 19ರಂದು ನಡೆದಿದ್ದ 85ನೇ ಸಭೆಯಲ್ಲಿ ಯೋಜನೆಯ ಬಗ್ಗೆ ಮತ್ತೆ ಚರ್ಚಿಸಲಾಗಿತ್ತು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಾರಿಗೊಳ್ಳುತ್ತಿರುವ ಯೋಜನೆ ಕುರಿತು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸ್ಥಾಯಿ ಸಮಿತಿ ನಿರ್ದೇಶನ ನೀಡಿತ್ತು. ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. 2026ರ ಫೆಬ್ರುವರಿಯಲ್ಲಿ ನಡೆದ ಸ್ಥಾಯಿ ಸಮಿತಿಯ ಸಭೆಯಲ್ಲಿ ಸಮಿತಿಯ ವರದಿ ಬಗ್ಗೆ ಚರ್ಚಿಸಲಾಗಿತ್ತು. ಯೋಜನೆ ಬಗ್ಗೆ ನಿಯಾಸ್‌ ಅಭಿಪ್ರಾಯ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸ್ಥಾಯಿ ಸಮಿತಿ ಸೂಚಿಸಿತ್ತು.

ಸಂಸ್ಥೆಯ ಶಿಫಾರಸುಗಳೇನು?:

'ದೇಶದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ವಿದ್ಯುತ್‌ ಸ್ಟೋರೇಜ್‌ಗೆ ಯಾವುದೇ ಗ್ರಿಡ್‌ ಇಲ್ಲ. ಪ್ರಸ್ತಾವಿತ ಪಂಪ್ಡ್ ಸ್ಟೋರೇಜ್ ಯೋಜನೆಯು ಇಂಧನ ಸಂಗ್ರಹ ಅವಶ್ಯಕತೆಗಳನ್ನು ಪೂರೈಸಲು ಅತಿ ಅಗತ್ಯ. ಯೋಜನೆಯು ಸಕಾಲದಲ್ಲಿ ಕಾರ್ಯಾರಂಭ ಮಾಡದಿದ್ದರೆ ರಾಜ್ಯದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಬೇಕಾಗುತ್ತದೆ ಹಾಗೂ ಅನ್ಯ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕಾಗುತ್ತದೆ' ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

'ಯೋಜನೆಯ ಭಾಗವಾಗಿ ನಾಗರಬಸ್ತಿ ಕೆರೆಯಿಂದ ಬೇಗೋಡೆವರೆಗೆ ರಸ್ತೆ ಅಗಲೀಕರಣ ಮಾಡಲು ಕೆಪಿಟಿಎಲ್‌ ಉದ್ದೇಶಿಸಿತ್ತು. ಈ ಪ್ರಸ್ತಾವಕ್ಕೆ ಸ್ಥಾಯಿ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕಾರಣದಿಂದ, ಸುರಂಗ ಮಾರ್ಗ ನಿರ್ಮಿಸುವುದಾಗಿ ಕೆಪಿಸಿಎಲ್‌ ಭರವಸೆ ನೀಡಿದೆ. ಈ ಹಿಂದೆ ರಸ್ತೆ ಅಗಲೀಕರಣಕ್ಕೆ 15.4 ಹೆಕ್ಟೇರ್‌ ಜಾಗ ಬೇಕಿತ್ತು. ಈಗ ಮಾರ್ಪಾಡು ಮಾಡಿರುವುದರಿಂದ 4.8 ಹೆಕ್ಟೇರ್‌ ಜಾಗ ಸಾಕು. ಒಟ್ಟಾರೆಯಾಗಿ, ಯೋಜನೆಗೆ ಅರಣ್ಯ ಬಳಕೆ ಪ್ರಮಾಣ 54 ಹೆಕ್ಟೇರ್‌ನಿಂದ 38 ಹೆಕ್ಟೇರ್‌ಗೆ ಇಳಿಯಲಿದೆ' ಎಂದು ಸಂಸ್ಥೆಯು ವರದಿಯಲ್ಲಿ ಉಲ್ಲೇಖಿಸಿದೆ.

ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿಶಿಷ್ಟ ಯೋಜನೆಯಾಗಿದ್ದು, ಈಗಿರುವ ಅಣೆಕಟ್ಟೆಗಳನ್ನು ಬಳಸಿಕೊಂಡೇ ವಿದ್ಯುತ್‌ ಉತ್ಪಾದನೆ ಮಾಡಲಿದೆ; ಹೀಗಾಗಿ, ಈ ಯೋಜನೆಗೆ ಅನುಮೋದನೆ ನೀಡುವುದು ಸೂಕ್ತ ಎಂದು ಸಂಸ್ಥೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani