ಕಮಲನಗರ: 'ಶಿಕ್ಷಕರ ಸಮಸ್ಯೆ ಹಾಗೂ ಅಭಿಪ್ರಾಯ ಹಂಚಿಕೊಳ್ಳಲು ಗುರುಸ್ಪಂದನ ಕಾರ್ಯಕ್ರಮ ಸಹಕಾರಿಯಾಗಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಾಗಂಬರ ಗಾಯಕವಾಡ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ ಹಮ್ಮಿಕೊಂಡಿದ್ದ ಗುರುಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 'ಶಿಕ್ಷಕರ ಬಡ್ತಿ, ಗಳಿಕೆ ರಜೆ ಮತ್ತು ನಾಮಿನಿ, ಟೈಮ್ ಬೌಂಡ್ ಸೇರಿದಂತೆ ವಿವಿಧ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು' ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಡರಿ ಆಡೆ ಮಾತನಾಡಿ, 'ಶಿಕ್ಷಕರು ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆ ಮೈಗೂಡಿಸಿಕೊಳ್ಳಬೇಕು. ಗುರುಸ್ಪಂದನದ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಘದ ಪದಾಧಿಕಾರಿಗಳಿಂದ ಮನವಿ ಮಾಡಲಾಗಿದೆ' ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ನುದನೂರೆ ಮಾತನಾಡಿ, 'ಶಿಕ್ಷಕರ ಸಮಸ್ಯೆ ಬಗ್ಗೆ ಇಲಾಖೆ ಶೀಘ್ರ ಸ್ಪಂದಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು' ಎಂದರು. ಕೆಪಿಎಸ್ ಶಾಲೆಯ ಮುಖ್ಯಶಿಕ್ಷಕ ಲಿಂಗಾನಂದ ಮಹಾಜನ ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಮಹಾಜನ, ಶಾಂತಕುಮಾರ ಗುಡಮೆ, ರಾಜಕುಮಾರ ವಡಗಾವೆ, ದಿಲೀಪ ವಾನಖೇಡೆ, ಶಿಲ್ಪಾ ಚಿಂಚೋಳ್ಳೆ, ಮೀರಾ ಪಾಟೀಲ, ವಿವೇಕಾನಂದ ಢಗೆ, ಇಲಾಖೆ ಸಿಬ್ಬಂದಿ ಗುರುಸಿದ್ದಯ್ಯ, ರವಿರಾಜ್, ಶಿವಕುಮಾರ ಶಿಂಧೆ ಸೇರಿದಂತೆ ಇತರರು ಇದ್ದರು. ರಾಜಕುಮಾರ ವಡಗಾವೆ ಸ್ವಾಗತಿಸಿದರು. ರೋಹಿದಾಸ ಮೇತ್ರೆ ನಿರೂಪಿಸಿದರು. ಉಮಾಕಾಂತ ಮಹಾಜನ ವಂದಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-33-760091885

