ಬಳ್ಳಾರಿ: 'ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಪವಾಗಿವೆ. ಬಿಜೆಪಿ ಮಾತ್ರವೇ ರಾಜ್ಯದಲ್ಲಿ ಶಿಕ್ಷಕರ ಹಿತ ಕಾಯುತ್ತಿದೆ' ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಆರೋಪಿಸಿದರು.
'ಹಲವು ಬಾರಿ ಅಧಿಕಾರ ಪಡೆದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಿಕ್ಷಕರ ಪರವಾಗಿ ನಿಲ್ಲದೆ ತೀರ್ಮಾನಗಳನ್ನು ಕೈಗೊಂಡಿವೆ. ಆದರೆ ಬಿಜೆಪಿ ಅಧಿಕಾರ ಪಡೆದ ಪ್ರತಿ ಬಾರಿಯೂ ಶಿಕ್ಷಕರಿಗೆ ಒಳಿತನ್ನೇ ಮಾಡಿದೆ' ಎಂದು ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಾಧ್ಯಮ ಶಿಕ್ಷಕರ ಸಂಘ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
'ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಶೇ 15ರಷ್ಟು ಅನುದಾನ ಕಡಿತಗೊಳಿಸಿತ್ತು. ನಂತರ ಉಪಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಶಾಶ್ವತ ಅನುದಾನ ರಹಿತ ವ್ಯವಸ್ಥೆಯನ್ನು ಬದಲಿಸಿದರು.
'ಬೇರೆಲ್ಲ ರಾಜ್ಯಗಳು ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸಿದರೆ, ಬಿಜೆಪಿ ಸರ್ಕಾರ ಆ ಕೆಲಸ ಮಾಡದೇ ನೌಕರರ ಪರವಾಗಿ ನಿಂತಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ವರ್ಗಾವಣೆ ನಿಯಮಿತವಾಗಿ ನಡೆಯಲಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿ ಶಿಕ್ಷಕಸ್ನೇಹಿ ವರ್ಗಾವಣೆ ನೀತಿ ಜಾರಿಗೆ ಬಂದಿದೆ' ಎಂದರು.
ಸಂಘದ ಉಪಾಧ್ಯಕ್ಷ ಆರ್.ರುದ್ರಪ್ಪ, ಗುಂಡಾಚಾರ್, ಗಂಗಾಧರ ಆಚಾರಿ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಇದ್ದರು.

