Dailyhunt Logo
  • Light mode
    Follow system
    Dark mode
    • Play Story
    • App Story
ಶಿರಸಿ | ಗುಟ್ಕಾ, ಪಾನ್ ಮಸಾಲಾ ನಿಷೇಧ: ಧಾರಣೆ ಕುಸಿತದ ಭೀತಿಯಲ್ಲಿ ಅಡಿಕೆ ಬೆಳೆಗಾರ

ಶಿರಸಿ | ಗುಟ್ಕಾ, ಪಾನ್ ಮಸಾಲಾ ನಿಷೇಧ: ಧಾರಣೆ ಕುಸಿತದ ಭೀತಿಯಲ್ಲಿ ಅಡಿಕೆ ಬೆಳೆಗಾರ

ಶಿರಸಿ: ಎಲೆಚುಕ್ಕಿ ರೋಗದ ತೀವ್ರತೆ ಹಾಗೂ ಇಳುವರಿ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ, ತಂಬಾಕು ಮತ್ತು ನಿಕೋಟಿನ್‌ಯುಕ್ತ ಉತ್ಪನ್ನಗಳ ಮೇಲಿನ ಸರ್ಕಾರದ ಹೊಸ ನಿರ್ಬಂಧ ಆತಂಕ ಉಂಟುಮಾಡಿದೆ. ಇದರಿಂದ ಅಡಿಕೆ ಬಳಕೆ ಕುಂಠಿತಗೊಂಡು ಮಾರುಕಟ್ಟೆ ಹಾಗೂ ಧಾರಣೆಯ ಮೇಲೆ ಪೆಟ್ಟು ಬೀಳಬಹುದು ಎಂಬ ಭೀತಿ ಬೆಳೆಗಾರರನ್ನು ಕಾಡತೊಡಗಿದೆ.

ರಾಜ್ಯ ಸರ್ಕಾರವು ತಂಬಾಕು ಮತ್ತು ನಿಕೋಟಿನ್‌ ಅಂಶ ಹೊಂದಿರುವ ಗುಟ್ಕಾ ಹಾಗೂ ಪಾನ್‌ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯನ್ನು ನೆಚ್ಚಿಕೊಂಡು ಸಾವಿರಾರು ಕುಟುಂಬಗಳು ಹಾಗೂ ಕೃಷಿ ಕಾರ್ಮಿಕರು ಜೀವನ ನಡೆಸುತ್ತಿದ್ದು, ಮಾರುಕಟ್ಟೆಯಲ್ಲಿ ಖರೀದಿ ಮಂದಗೊಂಡು ದರದಲ್ಲಿ ವ್ಯತ್ಯಾಸವಾಗಬಹುದು ಎಂಬ ಕಳವಳ ವ್ಯಕ್ತವಾಗಿದೆ. ಸರ್ಕಾರದ ಆದೇಶದ ಕಾರಣ ಕೆಲವು ವ್ಯಾಪಾರಸ್ಥರು ಖರೀದಿಗೆ ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಆದರೆ, ಮಾರುಕಟ್ಟೆ ತಜ್ಞರು ಮತ್ತು ಸ್ಥಳೀಯ ವ್ಯಾಪಾರಿಗಳು ಈ ಆತಂಕವನ್ನು ಸಮಾಧಾನಪಡಿಸುವ ಯತ್ನ ಮಾಡಿದ್ದಾರೆ. 'ಕರ್ನಾಟಕದಲ್ಲಿ ಬೆಳೆಯುವ ಶೇ 90ರಷ್ಟು ಅಡಿಕೆ ಉತ್ತರ ಪ್ರದೇಶ, ಬಿಹಾರ, ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಂತಹ ಹೊರರಾಜ್ಯಗಳಿಗೆ ರಫ್ತಾಗುವುದರಿಂದ, ರಾಜ್ಯದ ಒಳಗಿನ ನಿಷೇಧದಿಂದ ದರದಲ್ಲಿ ಯಾವುದೇ ದೊಡ್ಡ ಮಟ್ಟದ ವ್ಯತ್ಯಾಸವಾಗುವುದಿಲ್ಲ' ಎಂದು ವರ್ತಕರು ಹೇಳುತ್ತಾರೆ.

'ನಿಷೇಧದಿಂದ ಬೇಡಿಕೆ- ಪೂರೈಕೆಯ ಸಮತೋಲನ ಬದಲಾಗಿ ಮುಂದಿನ ದಿನಗಳಲ್ಲಿ ದರ ಇಳಿಯುವ ಬದಲು ಏರಿಕೆಯೂ ಆಗಬಹುದು' ಎಂದು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದ್ದಾರೆ.

'ನಿಷೇಧದಿಂದ ಒಮ್ಮೆ ದರದಲ್ಲಿ ವ್ಯತ್ಯಾಸ ಉಂಟಾಗಬಹುದು, ಇಂತಹ ನಿರ್ಧಾರ ಕೈಗೊಂಡರೆ ಸರ್ಕಾರಕ್ಕೂ ಕಷ್ಟವಾಗಲಿದೆ' ಎಂದು ಅಡಿಕೆ ವರ್ತಕ ಲೋಕೇಶ ಹೆಗಡೆ ಎಚ್ಚರಿಸಿದ್ದಾರೆ.

'ಭಯಪಡುವ ಅಗತ್ಯವಿಲ್ಲ'

'ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್‌ ಅಂಶ ಹೊಂದಿರುವ ಗುಟ್ಕಾ ಹಾಗೂ ಪಾನ್‌ ಮಸಾಲಾಗಳಂತಹ ಉತ್ಪನ್ನಗಳು 2011ರಿಂದಲೇ ನಿಷೇಧಕ್ಕೊಳಗಾಗಿದ್ದು, ಪ್ರತಿ ವರ್ಷ ನಿಯಮಿತವಾಗಿ ಸುತ್ತೋಲೆ ಹೊರಡಿಸಲಾಗುತ್ತದೆ. ಈಗ ಹೊರಡಿಸಿರುವುದು ಅದರ ಒಂದು ಭಾಗವೇ ಆಗಿದೆ. ಹೀಗಾಗಿ ಅಡಿಕೆ ಬೆಳೆಗಾರರು ಭಯಪಡುವ ಅಗತ್ಯವಿಲ್ಲ' ಎಂದು ಅಡಿಕೆ ವಹಿವಾಟಲ್ಲಿ ತೊಡಗಿರುವ ಪ್ರಮುಖ ಸಹಕಾರ ಸಂಘಗಳು ತಿಳಿಸಿವೆ.

ಗೋಪಾಲಕೃಷ್ಣ ವೈದ್ಯ, ಶಿರಸಿ ಟಿಎಸ್‌ಎಸ್‌ ಅಧ್ಯಕ್ಷದೇಶದ ಒಟ್ಟೂ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 75ರಷ್ಟಿದ್ದು, ಅಡಿಕೆ ವಹಿವಾಟಿನಿಂದ ಸರ್ಕಾರಕ್ಕೂ ಸಾವಿರಾರು ಕೋಟಿ ರೂಪಾಯಿ ಆದಾಯವಿದೆ. ಇಂತಹ ನಿರ್ಧಾರ ಯಾವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-20-864890358

Dailyhunt
Disclaimer: This content has not been generated, created or edited by Dailyhunt. Publisher: Prajavani